ಜಿಎಸ್ಟಿ ಇಳಿಕೆ: ದೇಶದ ಆರ್ಥಿಕತೆ ರೂಪಿಸಲು ಮಹತ್ವದ ಹೆಜ್ಜೆ: ಕ್ಯಾ. ಬ್ರಿಜೇಶ್ ಚೌಟ
2047ಕ್ಕೆ ವಿಕಸಿತ ಭಾರತ ನಿರ್ಮಾಣ ಪ್ರಧಾನಿ ಅವರ ಗುರಿಯಾಗಿದೆ. ಅದಕ್ಕಾಗಿ ಆತ್ಮನಿರ್ಭರತೆಯ ದಾರಿಯಲ್ಲಿ ಸಾಗಲಾಗುತ್ತಿದೆ. ಅದರ ಭಾಗವಾಗಿ ಜಿಎಸ್ಟಿ 2.0 ಜಾರಿಗೆ ತರಲಾಗಿದೆ. ಈ ಬಗ್ಗೆ ಬಿಜೆಪಿ ಆರ್ಥಿಕ ಪ್ರಕೋಷ್ಠದ ಜತೆಗೂಡಿ ಅಂಗಡಿ, ಮಾರುಕಟ್ಟೆಗಳಿಗೆ ತೆರಳಿ ಜನರ ಜತೆ ಸಂವಾದ, ಜಾಗೃತಿ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಜಿಎಸ್ಟಿ ಸುಧಾರಣೆ ನವರಾತ್ರಿ ಹಾಗೂ ಮುಂಬರುವ ಹಬ್ಬಗಳನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡಲು ಪ್ರೇರಣೆ ನೀಡಿದೆ. ವ್ಯಾಪಾರಿಗಳು, ಉದ್ದಿಮೆದಾರರು, ಗ್ರಾಹಕರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಉಳಿತಾಯ ಉತ್ಸವ ಆಯೋಜಿಸಲಾಗುತ್ತಿದೆ. ಜಿಎಸ್ಟಿ ಇಳಿಕೆಯ ಪರಿಣಾಮವನ್ನು ಈಗಾಗಲೇ ಮಾರುಕಟ್ಟೆಯಲ್ಲಿ ನಾವು ಕಾಣುತ್ತಿದ್ದೇವೆ. ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಬೇಡಿಕೆ ಹೆಚ್ಚುವ ಜತೆಗೆ ಉತ್ಪಾದನೆಯೂ ಅಽಕವಾಗಲಿದೆ. ಜನರ ಹಣ ಉಳಿತಾಯ ಆಗುವುದರೊಂದಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ. ಆಹಾರ, ಬಟ್ಟೆ, ವಸತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ವಾಹನಗಳ ಬೆಲೆ ಈಗಾಗಲೇ ಇಳಿಕೆಯಾಗಿದೆ. ವಾಹನಗಳ ಮಾರಾಟವೂ ಹೆಚ್ಚಾಗಿದೆ. ಹನಿ ನೀರಾವರಿ, ಕೃಷಿ ಯಂತ್ರೋಪಕರಣಗಳ ಬೆಲೆ ಇಳಿಕೆಯಿಂದ ರೈತರಿಗೆ ಅನುಕೂಲವಾಗಲಿದೆ. ಈ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಉತ್ತೇಜನ ದೊರೆಯಲಿದೆ ಎಂದು ವಿವರಿಸಿದರು.
ಬಿಜೆಪಿ ಆರ್ಥಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ಜಿಎಸ್ಟಿ ಇಳಿಕೆಯ ಲಾಭವನ್ನು ಈಗಾಗಲೇ ಆರ್ಥಿಕ ವಲಯದಲ್ಲಿ ಕಾಣುತ್ತಿದ್ದೇವೆ. ಅನೇಕ ವಸ್ತುಗಳ ಬೆಲೆ ಇಳಿಕೆಯಾಗಿದೆ. ಇದರ ನೇರ ಲಾಭ ಜನತೆಗೆ ಆಗಲಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ, ಪ್ರಕೋಷ್ಠಗಳ ಜಿಲ್ಲಾ ಸಹ ಸಂಚಾಲಕ ಪ್ರಸನ್ನ ದರ್ಬೆ, ಕೋಶಧಿಕಾರಿ ಸಂಜಯ ಪ್ರಭು, ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಪದೇ ಪದೇ ಹಿಂದು ವಿರೋಧಿ ಧೋರಣೆ ಪ್ರದರ್ಶಿಸುತ್ತಿದೆ. ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ಕೊಳ್ಳೆಹೊಡೆಯುವ ಜತೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮೂಲಕ ಹಿಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. 450 ಕೋಟಿ ರೂ. ಖರ್ಚು ಮಾಡಿ ನಡೆಸುತ್ತಿರುವ ಸಮೀಕ್ಷೆಯಲ್ಲಿ ಹೊಸ ಜಾತಿಗಳನ್ನು ಸೃಷ್ಟಿಸಲಾಗಿದೆ. ಸಮಾಜ ಒಡೆಯುವ ಈ ಪ್ರಯತ್ನ ಖಂಡನೀಯ ಎಂದು ಬ್ರಿಜೇಶ್ ಚೌಟ ಹೇಳಿದರು.
ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಎಲ್ಲ ಹಿಂದು ಧರ್ಮೀಯರು ಹಿಂದು ಎಂದು ನಮೂದಿಸುವಂತೆ ಅವರು ವಿನಂತಿಸಿದರು.