ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
Wednesday, September 24, 2025
ಮಂಗಳೂರು: ಮಹತೋಭಾರ ಶ್ರೀ ಮಂಗಳದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆಯುವ ಸಂಸ್ಕೃತಿಕ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಮೊರ್ಗನ್ಸ್ ಗೇಟ್ ಬ್ರ್ಯಾಂಚಿನ ಸೀನಿಯರ್ ಮ್ಯಾನೇಜರ್ ಶರಣ್ಯ ಎಸ್.ಪಿ. ಅವರು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಎಳೆಯ ಮಕ್ಕಳಲ್ಲಿ ಧಾರ್ಮಿಕ ಚಿಂತನೆ ಮೂಡಲು ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗೆ ಅವರನ್ನು ಕರೆತಂದು ಅವರಲ್ಲಿ ಮೌಲ್ಯಧಾರಿತ ವಿಚಾರಧಾರೆಯನ್ನು ತುಂಬಿಸುವಂತಹ ಕರ್ತವ್ಯವನ್ನು ಮಕ್ಕಳ ತಂದೆ ತಾಯಿಯಂದಿರು ಮಾಡಬೇಕು. ಶ್ರೀಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ವೇದಿಕೆಯಲ್ಲಿ ಧಾರ್ಮಿಕತೆಯ ವಿಷಯದಲ್ಲಿ ಉತ್ತಮ ವಿಚಾರ ಧಾರೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಅರುಣ್ ಐತಾಳ್, ಅನುವಂಶಿಕ ಮುಕ್ತೇಸರ ಹರೀಶ್ ಐತಾಳ್, ಅನುವಂಶಿಕ ಮುಕ್ತೇಸರ ರಘುರಾಮ ಉಪಾಧ್ಯಾಯ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕ್ಷೇತ್ರದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನಾ ಕಾರ್ಯದರ್ಶಿ ವಿನಯಾನಂದ ಕಾನಡ್ಕ ಉಪಸ್ಥಿತರಿದ್ದರು.
ಇಂದಿನಿಂದ 12 ದಿನಗಳ ಪರ್ಯಂತ ಕ್ಷೇತ್ರದಲ್ಲಿ ನಿರಂತರವಾಗಿ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿದೆ.