ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ತಿಮರೋಡಿ ಮನೆಗೆ ಮೂರನೇ ನೋಟಿಸ್ ಅಂಟಿಸಿದ ಪೊಲೀಸರು
ಮಹೇಶ್ ಶೆಟ್ಟಿ ತಿಮರೋಡಿ ಅವರು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಜಾಮೀನಿಗಾಗಿ ಮಂಗಳೂರಿನ ಸೆಷನ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಸೆ27ರಂದು ನಡೆಯಲಿದೆ. ಇಲ್ಲಿ ಅವರಿಗೆ ನಿರೀಕ್ಷಣಾ ಜಾಮೀನಿನ ಮೇಲೆ ತೀರ್ಪು ಬರುವವರೆಗೆ ಅವರು ಠಾಣೆಗೆ ಹಾಜರಾಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.
ಮಹೇಶ್ ಶೆಟ್ಟಿ ತಿಮರೋಡಿ ಪ್ರಕರಣ ದಾಖಲಾದ ಬಳಿಕ ಕಳೆದ ಹತ್ತು ದಿನಗಳಿಂದ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದು, ಇದು ಮಹೇಶ್ ಶೆಟ್ಟಿ ಅವರನ್ನು ಇಕ್ಕಟ್ಟಿಗೆ ಸಿಕುಕಿಸಿದೆ. ಗಡಿಪಾರು ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ಗೆ ಹೋಗುವ ಅವಕಾಶವಿದ್ದು, ಈ ಬಗ್ಗೆಯೂ ಪ್ರಯತ್ನಗಳು ನಡೆಯುತ್ತಿದೆ ಎನ್ನಲಾಗಿದೆ.
ಹಣದ ಆಸೆಗಾಗಿ ಷಡ್ಯಂತ್ರಕ್ಕೆ ಒಳಗಾದೆ..
ಹಣದ ಆಸೆಗಾಗಿ ಷಡ್ಯಂತ್ರಕ್ಕೆ ಒಳಗಾದೆ ಎಂದು ಚಿನ್ನಯ್ಯ ಎಸ್ಐಟಿ ಕಚೇರಿಯಲ್ಲೇ ನನ್ನ ಕಾಲಿಗೆ ಬಿದ್ದಿದ್ದ ಎಂದು ನೇತ್ರಾವತಿ ಸ್ನಾನಘಟ್ಟದ ಮಾಹಿತಿ ಕೇಂದ್ರದಲ್ಲಿ ಮೇಲ್ವಿಚಾರಕರಾಗಿದ್ದ ಸುಂದರ ಗೌಡ ಬಜಿಲ ಹೇಳಿದ್ದಾರೆ.
ನಾನು 1996ರಿಂದ 2000ದ ತನಕ ನೇತ್ರಾವತಿ ಸ್ನಾನ ಘಟ್ಟದ ಮಾಹಿತಿ ಕೇಂದ್ರದಲ್ಲಿ ಮೇಲ್ವಿಚಾರಕನಾಗಿದ್ದೆ. ಆ ಸಂದರ್ಭದಲ್ಲಿ ಚಿನ್ನಯ್ಯ, ಅಕ್ಕ, ಅಣ್ಣ, ಬಾವ, ಅತ್ತಿಗೆ ಎಲ್ಲರೂ ಶುಚಿತ್ವದ ಕೆಲಸ ಮಾಡುತ್ತಿದ್ದರು. ಶುಚಿತ್ವ ಕೆಲಸಕ್ಕೆಂದೇ ಆತನನ್ನು ನೇಮಕ ಮಾಡಿದ್ದು, ಅದನ್ನೇ ಮಾಡುತ್ತಿದ್ದ. ಚಿನ್ನಯ್ಯ ಹೇಳಿದ್ದು ಎಲ್ಲವೂ ಸತ್ಯಕ್ಕೆ ದೂರವಾದ ವಿಚಾರ. ಕ್ಷೇತ್ರದ ಹೆಸರು ಹಾಳು ಮಾಡಬೇಕು, ಷಡ್ಯಂತ್ರ ಮಾಡಬೇಕು ಎಂಬುದೇ ಆತನ ಉದ್ದೇಶವಾಗಿತ್ತು ಎಂದು ಕಿಡಿಕಾರಿದರು.
ನೇತ್ರಾವತಿ ನದಿಯಲ್ಲಿ ಶವ ತೇಲುತ್ತಾ ಬಂದರೆ ನಾವು ಅದನ್ನು ಹೂತು ಹಾಕುವ ಕೆಲಸ ಮಾಡುವುದಿಲ್ಲ. ಏನಿದ್ದರೂ ಪೊಲೀಸರಿಗೆ ತಿಳಿಸಿ ಆಸ್ಪತ್ರೆಗೆ ಸಾಗಿಸುತ್ತಿದ್ದೆವು. ಆತ ಮೃತದೇಹವನ್ನ ಕಾರಿಗೆ ಶಿಫ್ಟ್ ಮಾಡುವ, ಪೊಲೀಸರ ಜೊತೆ ಆಸ್ಪತ್ರೆಗೆ ಹೋಗುವ ಕೆಲಸ ಮಾಡುತ್ತಿದ್ದ. ಒಂದೇ ಒಂದು ಶವ ಹೂತು ಹಾಕುವ ಕೆಲಸ ಆತ ಮಾಡಿಲ್ಲ. ಎಸ್ಐಟಿ ಅಧಿಕಾರಿಗಳು ನನ್ನನ್ನು ಕರೆದಿದ್ದರು. ನಿಮ್ಮ ಮೇಲೆ ಆರೋಪಿ ಚಿನ್ನಯ್ಯ ಅಪವಾದ ಹಾಕಿದ್ದಾನೆ ಎಂದಿದ್ದರು. ಆತ ಶವ ಹೂತಿಟ್ಟ ವಿಚಾರದಲ್ಲಿ ನನ್ನ ಮೇಲೆ ಅಪವಾದ ಹಾಕಿದ್ದ. ಎರಡನೇ ಬಾರಿ ವಿಚಾರಣೆಗೆ ಚಿನ್ನಯ್ಯ ಹಾಗೂ ನನ್ನನ್ನು ಒಟ್ಟಿಗೆ ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ನಾನು ಷಡ್ಯಂತ್ರಕ್ಕೆ ಬಲಿಯಾಗಿದ್ದೇನೆ, ನಾನು ದುಡ್ಡಿನ ಆಸೆಗೆ ಇದೆಲ್ಲವನ್ನೂ ಮಾಡಿದ್ದು, ನನ್ನದು ತಪ್ಪಾಯಿತು. ನನ್ನನ್ನು ಬಚಾವ್ ಮಾಡಿ ಎಂದು ಕಾಲಿಗೆ ಬಿದ್ದಿದ್ದ ಎಂದರು.