ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಹೆಗ್ಗಡೆ ಸಂತಾಪ
Wednesday, September 24, 2025
ಉಜಿರೆ: ಖ್ಯಾತ ಕಾದಂಬರಿಕಾರ ಮತ್ತು ಲೇಖಕ ಎಸ್.ಎಲ್. ಭೈರಪ್ಪನವರು ನಿಧನರಾದ ಸುದ್ಧಿ ತಿಳಿದು ವಿಷಾದವಾಯಿತು.
2025 ರ ಜುಲೈ 26 ರಂದು ಬೆಂಗಳೂರಿನಲ್ಲಿ ವಿಶ್ವೇಶ್ವರ ಭಟ್ ಅವರ ನೂರನೆ ಕೃತಿ ಬಿಡುಗಡೆ ಸಮಾರಂಭದಲ್ಲಿ ನಾವು ಜೊತೆಯಾಗಿ ಭಾಗವಹಿಸಿದ್ದು ಆತ್ಮೀಯವಾಗಿ ಮಾತನಾಡಿದ್ದೆವು. ಅದು ನಮ್ಮ ಕೊನೆಯ ಭೇಟಿಯಾಗಿತ್ತು.
ನೇರ ನಡೆ-ನುಡಿಯ ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಕನ್ನಡ ನಾಡು-ನುಡಿ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಅನೇಕ ಕಾದಂಬರಿಗಳು ಹಾಗೂ ಸಾಹಿತ್ಯ ಕೃತಿಗಳು ಹಲವು ಬಾರಿ ಮರು ಮುದ್ರಣಗೊಂಡಿರುವುದಲ್ಲದೆ ಇತರ ಭಾಷೆಗಳಿಗೂ ಭಾಷಾಂತರಗೊಂಡಿವೆ. ಅವರ ಹೆಚ್ಚಿನ ಕೃತಿಗಳನ್ನು ನಾನು ಆಸಕ್ತಿಯಿಂದ ಓದಿದ್ದೇನೆ.
1981 ರ ನವೆಂಬರ್ 26 ರಂದು ಲಕ್ಷದೀಪೋತ್ಸವ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸಂತಾಪ ಸೂಚಿಸಿದ್ದಾರೆ.