ಜಿಎಸ್ಟಿ ಎಲ್ಲೆಲ್ಲಿ ಶೂನ್ಯ ಮಾಡಿದ್ದಾರೆ: ಸಂಸದರಿಗೆ ಪದ್ಮರಾಜ್ ಆರ್. ಪೂಜಾರಿ ಪ್ರಶ್ನೆ
ಮಂಗಳೂರು: ದ.ಕ. ಸಂಸದ ಬ್ರಿಜೇಶ್ ಚೌಟ ವಿದ್ಯಾವಂತರಾದ ವ್ಯಕ್ತಿ. ಆದರೆ ವಿಚಾರಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಮಾತನಾಡಬೇಕು. ಜನರಿಗೆ ತಪ್ಪು ಮಾಹಿತಿ ನೀಡಬಾರದು. ಸಿಎಂ ಸಿದ್ದರಾಮಯ್ಯ ಜನಪರ ನಾಯಕರು. ಅವರು ರಾಜ್ಯದ ಅಭಿವೃದ್ಧಿಗೆ ಸತತ ಪ್ರಯತ್ನಿಸುತ್ತಿದ್ದಾರೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬ್ರಿಜೇಶ್ ಚೌಟ ಅವರು ಸಿಎಂ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಹಲವು ಅಸಂಗತೆಗಳು ಗೋಚರಿಸುತ್ತಿವೆ ಎಂದು ಆರೋಪಿಸಿದ್ದರು. ಜಿಎಸ್ಟಿ ಕುರಿತ ವಿಚಾರವನ್ನು ಪ್ರಸ್ತಾಪಿಸಿ, ಆರೋಗ್ಯ ಕ್ಷೇತ್ರದಲ್ಲಿ ಉಚಿತ ಸೇವೆ ನೀಡಬೇಕೆಂದು ಆಗಲೇ ಒತ್ತಾಯವಿತ್ತು, ಆದರೆ ಇತ್ತೀಚಿನ ಹೆಲ್ತ್ ಪಾಲಿಸಿಯಲ್ಲಿ ಜಿಎಸ್ಟಿ ಶೂನ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ, ಆದರೆ ನಿಜವಾಗಿಯೂ ಎಲ್ಲೆಲ್ಲಿ ಶೂನ್ಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು 15 ಬಜೆಟ್ ಮಂಡನೆ ಮಾಡಿದ ನಾಯಕರು. ಅವರು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಸರ್ಕಾರ ದಿವಾಳಿ ಆಗುತ್ತದೆ ಎಂದು ಚೌಟ ಆರೋಪಿಸಿದ್ದಾರೆ,
ಆದರೆ ಸರ್ಕಾರ ಇಂದು ಸುಸಜ್ಜಿತವಾಗಿ ನಡೀತಿದೆ ಎಂದರು.
ಬಿಜೆಪಿ ಆಡಳಿತ ವೇಳೆ ಬಂಗಾರದ ಬೆಲೆ 28 ಸಾವಿರ ರೂ. ಇತ್ತು, ಈಗ 1.30 ಲಕ್ಷಕ್ಕೆ ರೂ. ಏರಿಕೆಯಾಗಿದೆ. ಕ್ರೂಡ್ ಆಯಿಲ್ ಬೆಲೆಯೂ ಹೆಚ್ಚಾಗಿದೆ, ಆದರೂ ವಿರೋಧ ಪಕ್ಷ ಬಿಜೆಪಿ ಮೌನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಸರಿಯಾಗಿ ಜಿಎಸ್ಟಿ ಪಾವತಿಸುತ್ತಿದೆ. ಕೇಂದ್ರ ಸರ್ಕಾರವೇ ಈ ವಿಷಯದಲ್ಲಿ ಸ್ಪಷ್ಟತೆ ನೀಡಬೇಕಿದೆ. ರಾಜ್ಯದ ಮೇಲೆ ಅನವಶ್ಯಕ ಆರೋಪ ಮಾಡುವುದು ಸರಿಯಲ್ಲ ಎಂದರು.