ಸಿಜೆಐ ಗವಾಯಿಗಳ ಮೇಲೆ ಶೂ ಎಸೆತ: ಡಿವೈಎಫ್ಐ ಖಂಡನೆ
ಮಂಗಳೂರು: ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದು ದಾಳಿಗೈದ ದುಷ್ಕೃತ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ದ.ಕ. ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಹಾಗೂ ನ್ಯಾಯಾಧೀಶರ ಮೇಲೆ ಶೂ ಎಸೆದ ಕೋಮುವಾದಿ ಹೀನ ಮನಸ್ಸಿನ ಆರೋಪಿ ವಕೀಲನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಪ್ರಕಟಣೆಯಲ್ಲಿ ಆಗ್ರಹಿಸಿದೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನಲ್ಲಿ ನೋಂದಾಯಿಸಿಕೊಂಡಿರುವ ಆರೋಪಿ ವಕೀಲನ ಸನದನ್ನು ಈ ಕೂಡಲೇ ರದ್ದುಗೊಳಿಸಬೇಕು. ಸರ್ವೋಚ್ಚ ನ್ಯಾಯಾಲಯದಲ್ಲಿ ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ದುರುದ್ದೇಶಪೂರ್ವಕವಾಗಿ ಅವಮಾನಗೈದು ಗೂಂಡಾಗಿರಿಯ ವಿಕೃತಿ ಮೆರೆದ ಆರೋಪಿಯನ್ನು ಜಾಮೀನುರಹಿತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಘನತೆಯ ಹಾಗೂ ಅತ್ಯಂತ ಮುಖ್ಯವಾದ ಸ್ಥಾನದಲ್ಲಿರುವ ಸಿಜೆಐ ಗವಾಯಿ ಅವರ ಮೇಲೆ ನ್ಯಾಯಾಲಯದ ಕೋಣೆಯಲ್ಲಿ ಆರೋಪಿ ವಕೀಲನು ಶೂ ಎಸೆಯುತ್ತಾ, ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಿರುವುದು ಅತ್ಯಂತ ಆಘಾತಕಾರಿಯಾದುದು. ಪೂರ್ವನಿಯೋಜಿತವಾಗಿ ದುರುದ್ದೇಶದಿಂದ ನಡೆಸಿದ ಘಟನೆಯು ದೇಶದ ಸಂವಿಧಾನದ ಜಾತ್ಯಾತೀತ ಬುನಾದಿಗೆ ವಿರುದ್ಧವಾಗಿ ಕೋಮುವಾದಿ ಹಾಗೂ ಜಾತಿವಾದಿ ಹೀನ ಮನಸ್ಥಿತಿಯ ಶಕ್ತಿಗಳು ಇದರ ಹಿಂದೆ ಇರುವಂತಿದೆ. ಸಂವಿಧಾನ ಅಪಮೌಲ್ಯಗೊಳಿಸುವ ಕೆಲ ಬಿಜೆಪಿ ನಾಯಕರ ಹೆಳಿಕೆಗಳು ಆರೋಪಿಗೆ ಇಂತಹ ದುಷ್ಕೃತ್ಯ ನಡೆಸಲು ಬಲ ತುಂಬಿವೆ.
ಕೋಮುವಾದಿ ಶಕ್ತಿಗಳು ದುಷ್ಕೃತ್ಯಕ್ಕೆ ಗುರಿಯಾಗಿರುವ ಸಿಜೆಐ ಬಿ.ಆರ್. ಗವಾಯಿ ಅವರಿಗೆ ಕೇಂದ್ರ ಸರ್ಕಾರವು ಸಂಪೂರ್ಣ ರಕ್ಷಣೆಯನ್ನು ಖಾತ್ರಿಪಡಿಸಬೇಕು ಹಾಗೂ ಅಸಹಿಷ್ಣುತೆಯಿಂದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ದಾಳಿಗೆ ಮುಂದಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ದಕ್ಷಣ ಕನ್ನಡ ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ಆಗ್ರಹಿಸಿದೆ.