ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲದಿದ್ದಾಗ ಶಿಕ್ಷಣ ಕ್ಷೇತ್ರ ಅಭಿವೃದ್ಧಿ: ಭೋಜೇ ಗೌಡ

ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲದಿದ್ದಾಗ ಶಿಕ್ಷಣ ಕ್ಷೇತ್ರ ಅಭಿವೃದ್ಧಿ: ಭೋಜೇ ಗೌಡ


ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇರಲೇ ಬಾರದು, ಆಗ ಮಾತ್ರ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಹೇಳಿದ್ದಾರೆ.


ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಕುಪ್ಮಾ ಇದರ ದ.ಕ. ಜಿಲ್ಲಾ  ಸಮಿತಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶಿಕ್ಷಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ), ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಎಂದು ಸರ್ಕಾರ ತಿಕ್ಕಾಟದಲ್ಲಿ ತೊಡಗಿದೆ. ಹೀಗೆ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಸಾಧ್ಯವಿಲ್ಲ. ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಅಂತಹ ಶಾಲೆಗಳ ಮಾನ್ಯತೆ ನವೀಕರಣ, ಮಾಲಿನ್ಯ ನಿಯಂತ್ರಣ ಮಂಡಳಿಯೇ ಮೊದಲಾದವುಗಳ ಉಪಟಳಕ್ಕೆ ಅವಕಾಶ ನೀಡಬಾರದು. ಐಎಎಸ್, ಐಪಿಎಸ್ ಕಲಿತ ಅಧಿಕಾರಿಗಳು ನಾವು ಕೂಡ ತಳಮಟ್ಟದ ಇಂತಹ ಶಿಕ್ಷಣ  ಸಂಸ್ಥೆಗಳಿಂದಲೇ ಮೇಲೆ ಬಂದಿರುವುದನ್ನು ಮರೆಯಬಾರದು. ಆಡಳಿತ ಭಾಷೆ ಕನ್ನಡ ಮಾಡುತ್ತೇವೆ ಎನ್ನುವ ಮುಖ್ಯಮಂತ್ರಿಗಳು ಬಾಯ್ಮಾತಿನಲ್ಲಿ ಹೇಳಿದರೆ ಸಾಲದು, ಅದಕ್ಕೆ ಪೂರಕ ವ್ಯವಸ್ಥೆ ಮಾಡಿಕೊಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಜೊತೆ ಸಂಸ್ಕಾರ, ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.


ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ರಾಜೇಶ್ವರಿ ಎಚ್.ಎಚ್. ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲರ ಪಾತ್ರ ಬಹುಮುಖ್ಯ. ಸರ್ಕಾರಿ ಶಾಲೆಗಳಿಗೆ ಸರಿಸಾಟಿಯಾಗಿ ಖಾಸಗಿ ಶಾಲೆಗಳು ಮೂಲಸೌಕರ್ಯವನ್ನು ಹೊಂದಿವೆ. ಖಾಸಗಿ ಶಾಲೆಗಳೂ ಉತ್ತಮ ರೀತಿಯ ಶಿಕ್ಷಣ ನೀಡುತ್ತಿವೆ. ರಾಜ್ಯದಲ್ಲಿ 4,500 ಪಿಯು ಕಾಲೇಜುಗಳಿದ್ದು, ದ.ಕ. ಜಿಲ್ಲೆಯಲ್ಲಿ 55 ಸರ್ಕಾರಿ ಪಿಯು, 41 ಅನುದಾನಿತ ಹಾಗೂ 113 ಅನುದಾನ ರಹಿತ ಪಿಯು ಕಾಲೇಜುಗಳಿವೆ. ಇವುಗಳಲ್ಲಿ ವಸತಿ ಶಾಲೆಗಳೂ  ಸೇರಿವೆ. ಎಲ್ಲವೂ ಗುಣಟ್ಟದ ಶಿಕ್ಷಣ ನೀಡುತ್ತಿವೆ ಎಂದರು.

ಕುಪ್ಮಾ ರಾಜ್ಯ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮಾತನಾಡಿ, ಕೊರೋನಾ ವೇಳೆ ಖಾಸಗಿ ಪಿಯು ಶಿಕ್ಷಣ ಸಂಸ್ಥೆಗಳು ತೊಂದರೆಗೆ ಸಿಲುಕಿದ್ದು, ಬಳಿಕ  ಸುಧಾರಿಸಿಕೊಂಡಿವೆ. ವಿದ್ಯಾರ್ಥಿಗಳ ಜೀವನದಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ವ್ಯಕ್ತಿತ್ವ ರೂಪಿಸುವ ಹಂತಗಳಾಗಿವೆ ಎಂದರು.

ಇನ್ನೋರ್ವ ಗೌರವಾಧ್ಯಕ್ಷ ಡಾ.ಕೆ.ಸಿ.ನಾಯ್ಕ್ ಮಾತನಾಡಿ, ನಾನೇ ಸ್ಥಾಪಿಸಿದ ಕುಪ್ಮಾ ರಾಜ್ಯ ಮಟ್ಟಕ್ಕೆ ವಿಸ್ತರಣೆಗೊಳ್ಳುತ್ತಿರುವುದು ಖುಷಿ ತಂದಿದೆ. ಇನ್ನಷ್ಟು ಮಂದಿ ಸದಸ್ಯರ ಸೇರ್ಪಡೆಯಾಗಬೇಕಾಗಿದೆ ಎಂದರು.

ರಾಜ್ಯ ಸಮಿತಿ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್.ನಾಯಕ್ ಮಾತನಾಡಿ, 130 ಪಿಯು ಕಾಲೇಜು ಪೈಕಿ ಇದರ ಸದಸ್ಯರಾದವರು 31 ಕಾಲೇಜುಗಳು ಮಾತ್ರ. ಪ್ರತಿಯೊಬ್ಬ ಸದಸ್ಯರೂ ಹೊಸದಾಗಿ ಕನಿಷ್ಠ ಒಬ್ಬರು ಸದಸ್ಯರ ಸೇರ್ಪಡೆಗೆ ಪ್ರಯತ್ನಿಸಬೇಕು. ಈ ಮೂಲಕ ಕುಪ್ಮಾ ಸಂಘಟನೆ ಬಲಪಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ ರಾಜ್ಯ ಸಮಿತಿ ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿ, ರಾಜ್ಯದಲ್ಲಿ 6,189 ಪಿಯು ಕಾಲೇಜುಗಳಿದ್ದು, 226 ಕಾಲೇಜುಗಳು ಮಾತ್ರ ಕುಪ್ಮಾ ಜೊತೆ  ಜೋಡಣೆಯಾಗಿವೆ. ಪ್ರತಿ ಜಿಲ್ಲೆಯ ಪಿಯು ಕಾಲೇಜುಗಳು ಕುಪ್ಮಾ ಜೊತೆ ಸೇರಿದಾಗ ಮಾತ್ರ ಸಂಘಟನೆ ಬಲಗೊಳ್ಳಲು ಸಾಧ್ಯ. ಹೊರ ರಾಜ್ಯಗಳ ಪಿಯು ಶಿಕ್ಷಣ  ಸಂಸ್ಥೆಗಳು ನಮ್ಮ ರಾಜ್ಯದಲ್ಲಿ ತಲೆ ಎತ್ತುತ್ತಿವೆ. ಶೇ.60 ರಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಪಿಯು ಶಿಕ್ಷಣಕ್ಕೆ ತಮ್ಮದೇ ಕೊಡುಗೆ ನೀಡುತ್ತಿವೆ. ಶಿಕ್ಷಣಕರ ನೇಮಕ, ಪ್ರಶ್ನೆ  ಪತ್ರಿಕೆ ತಯಾರಿ, ಪ್ರಶಸ್ತಿ ಆಯ್ಕೆಗಳಿಗೆ ಸರ್ಕಾರ ಖಾಸಗಿ ಪಿಯು ಶಿಕ್ಷಣ ಸಂಸ್ಥೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪದವಿ ತರಗತಿಗಳಿಗೆ  ಇದ್ದಂತೆ ಪಿಯುಗೂ ಪ್ರತಿಭಾವಂತ ವಿದ್ಯಾರ್ಥಿಗಳ ಅನ್ವೇಷಣೆಗೆ ಪ್ರತ್ಯೇಕ ಕಾರ್ಯಕ್ರಮ ನಡೆಯಬೇಕು ಎಂದರು.

ಈ ಸಂದರ್ಭ ಹೊಸ ಪದಾಧಿಕಾರಿಗಳಿಗೆ ಬ್ಯಾಡ್ಜ್ ನೀಡುವ ಮೂಲಕ ಪದಗ್ರಹಣ ನೆರವೇರಿಸಲಾಯಿತು. ಬಳಿಕ ಅಧಿಕಾರ ಹಸ್ತಾಂತರ ಪತ್ರ ಹಸ್ತಾಂತರಿಸಲಾಯಿತು.  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕರನ್ನು ಗೌರವಿಸಲಾಯಿತು.

ಅಧ್ಯಕ್ಷ ಯುವರಾಜ್ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಮಂಜುನಾಥ ರೇವಣ್ಕರ್ ವಂದಿಸಿದರು. ರಾಜ್ಯ ಸಮಿತಿ ಗೌರವ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಣೈ ಇದ್ದರು. ಸ ನಿಲ್ ಪನ್ನೆಮಜಲು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article