ಸೌಜನ್ಯ ಪ್ರಕರಣ: ನ್ಯಾಯಕ್ಕಾಗಿ ಜನಾಗ್ರಹ ದಿನಾಚರಣೆ
ಮಂಗಳೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ 13 ವರ್ಷ ತುಂಬಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಸೌಜನ್ಯ ಪ್ರಕರಣ ನ್ಯಾಯಕ್ಕಾಗಿ ಜನಾಗ್ರಹ ದಿನಾಚರಣೆ ಇಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಈ ಸಂದರ್ಭ ಧರ್ಮಸ್ಥಳ ದೌರ್ಜನ್ಯಗಳು ಮತ್ತು ಇತಿಹಾಸ ಮತ್ತು ವರ್ತಮಾನ ಪುಸ್ತಕವನ್ನು ಪತ್ರಕರ್ತ ನವೀನ್ ಸೂರಿಂಜೆ ಬಿಡುಗಡೆಗೊಳಿಸಿದರು.
ಹೋರಾಟಗಾರರಾದ ವಿಷ್ಣುಮೂರ್ತಿ ಭಟ್, ಸಿಪಿಐಎಂ ಮುಖಂಡ ಯಾದವ ಶೆಟ್ಟಿ, ಬಿ.ಎಂ ಭಟ್ ಮಾತನಾಡಿದರು. ರೈತ ಮುಖಂಡ ಲಕ್ಷ್ಮಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಜಿಲ್ಲಾ ಅಧ್ಯಕ್ಷ ಮನೋಜ್ ಕುಮಾರ್, ಡಿ.ವೈ ಎಫ್.ಐ ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್, ಮಾನವ ಬಂಧುತ್ವ ವೇದಿಕೆಯ ಚೆನ್ನಕೇಶವ, ಪದ್ಮಲತಾ ಕುಟುಂಬದ ಇಂದ್ರಾವತಿ, ಶಶಿಧರನ್, ಜನವಾದಿ ಮಹಿಳಾ ಸಂಘದ ಕಿರಣ ಪ್ರಭ ಈಶ್ವರಿ ಉಪಸ್ಥಿತರಿದ್ದರು.
ನಂಬಿಕೆ ಹೊರಟು ಹೋಗಿದೆ...
ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ಕಳೆದ 13ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಆದರೆ ನ್ಯಾಯ ಮಾತ್ರ ಸಿಗುತ್ತಿಲ್ಲ. ಇದೀಗ ನ್ಯಾಯ ಕೇಳಿದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಲು ಮುಂದಾಗುತ್ತಿದ್ದಾರೆ. ನ್ಯಾಯ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು. ನ್ಯಾಯಕ್ಕಾಗಿ ನಡೆಯುವ ಹೋರಾಡುವನ್ನು ಯಾವುದೆ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು.