ವಿರಮಿಸಿ ಹಾಗೂ ನವಚೇತನ ಪಡೆಯಿರಿ’: ಆಳ್ವಾಸ್ ವಾಹನ ಚಾಲಕರಿಗೆ ವಿನೂತನ ಕಾಯ೯ಕ್ರಮ
Thursday, October 16, 2025
ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ಮನಶಾಸ್ತ್ರ ವಿಭಾಗ ಹಾಗೂ ಆಳ್ವಾಸ್ ಸೆಂಟರ್ ಫಾರ್ ವೆಲ್ನೆಸ್ ಟ್ರೈನಿಂಗ್ವತಿಯಿಂದ ಪಿಜಿ ಸೆಮಿನಾರ್ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಸ್ ಚಾಲಕರಿಗಾಗಿ ‘ವಿರಮಿಸಿ ಹಾಗೂ ನವಚೇತನ ಪಡೆಯಿರಿ’ ಎಂಬ ವಿಶೇಷ ಕಾರ್ಯಗಾರ ನಡೆಯಿತು.
ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಅವರು ಭಾಗವಹಿಸಿ ಮಾತನಾಡಿ ಸಮಾಜದಲ್ಲಿ ಐವತ್ತು ವರ್ಷಗಳ ಹಿಂದೆ ಚಾಲಕ ವೃತ್ತಿ, ಇಂದಿನ ವಿಮಾನದ ಪೈಲಟ್ ವೃತ್ತಿಯಂತೆ ಎಲ್ಲರಿಂದ ಮನ್ನಣೆಗೆ ಪಾತ್ರವಾಗಿತ್ತು. ಕಾಲಕ್ರಮೇಣ, ಈ ವೃತ್ತಿಯ ಪ್ರಾಮುಖ್ಯತೆ ಕಡಿಮೆಯಾಗುತ್ತಿದ್ದರೂ, ವಾಸ್ತವದಲ್ಲಿ ಇದು ಅತ್ಯಂತ ಜವಾಬ್ದಾರಿಯುತ ಹಾಗೂ ಸವಾಲಿನ ಕೆಲಸವಾಗಿದೆ. ಚಾಲಕರು ದಿನನಿತ್ಯದ ಕೆಲಸದಲ್ಲಿ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮಾನಸಿಕ ಆರೋಗ್ಯವನ್ನು ಸ್ಥಿರವಾಗಿರಿಸಿಕೊಂಡು ಕಾಳಜಿಯುತವಾಗಿರುವುದು ಬಹಳ ಮುಖ್ಯ.
ವಾಹನದ ಕಾರ್ಬೋರೇಟರ್ ಹೀಟ್ ಆದಾಗ ನೀರು ಬಳಕೆ ಮಾಡುವಂತೆ, ಇಂಜಿನ್ ಆಯಿಲ್ ನಿಯಮಿತವಾಗಿ ಬದಲಿಸುವಂತೆ, ನಮ್ಮ ಮನಸ್ಸಿಗೂ ವಿಶ್ರಾಂತಿ ಮತ್ತು ಸಮರ್ಪಕ ಆರೈಕೆ ಅಗತ್ಯ ಎಂದರು.
ಆಳ್ವಾಸ್ ಸೆಂಟರ್ ಫಾರ್ ವೆಲ್ನೆಸ್ ಟ್ರೈನಿಂಗ್ನ ನಿರ್ದೇಶಕಿ ಡಾ. ದೀಪಾ ಕೊಠಾರಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಚಾಲಕರಿಗೆ ತಂಡ ನಿರ್ವಹಣೆ, ಸಮಸ್ಯೆ ಪರಿಹಾರ, ಒತ್ತಡ ನಿರ್ವಹಣೆ ಹಾಗೂ ಸಂವಹನದ ಕುರಿತು ವಿವಿಧ ಚಟುವಟಿಕೆಗಳನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾರಿಗೆ ಅಧಿಕಾರಿ ರೋಶನ್, ಆಳ್ವಾಸ್ ಪದವಿ ಕಾಲೇಜಿನ ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಜೋಸ್ವಿಟಾ ಇದ್ದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ಶ್ರೀವಲ್ಲಿ ಕಾಯ೯ಕ್ರಮ ನಿರೂಪಿಸಿದರು.

