ಬಂಟಕಲ್ಲು ಕಬ್ಬಿಣದ ಸೆಂಟ್ರಿಂಗ್ ಶೀಟು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೆರೆ
ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಯಂವದಾ ಮಾರ್ಗದರ್ಶನದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ್ ಮರಬದ, ಪಿಎಸ್ಐ ಲೋಹಿತ್ ಕುಮಾರ್, ಸಿಬ್ಬಂಧಿಗಳಾದ ಸಿದ್ಧರಾಯಪ್ಪ, ಶಿವಾನಂದಪ್ಪ, ಪಡುಬಿದ್ರೆ ಪೋಲೀಸ್ ಠಾಣಾ ಸಿಬ್ಬಂಧಿ ನವೀನ್,ಸಂದೇಶ್ರವರ ಪೊಲೀಸರ ತಂಡ ತೀವ್ರ ಕಾಯಾಚರಣೆ ನಡೆಸಿ ಬೈಂದೂರು ಶಿರೂರು ಗ್ರಾಮದ ಆಲಂದೂರು ರಶೀದ್ ಮೊಯಿದ್ದೀನ್ (40) ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದಾಗ ವಿವಿಧ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.
ಆರೋಪಿ ರಶೀದ್ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟಕಲ್ ಹಾಗೂ ಪಂಜಿಮಾರ್, ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲೂರು ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಬೆಳ್ತೂರ್ ಎಂಬಲ್ಲಿ ಕಬ್ಬಿಣದ ಶೀಟ್ಗಳನ್ನು ಕಳವು ಮಾಡಿರುವುದು ಪತ್ತೆಯಾಗಿದ್ದು, ಒಟ್ಟು 300 ಕಬ್ಬಿಣದ ಶೀಟ್ಗಳು ಹಾಗೂ ಆರೋಪಿಯು ಕೃತ್ಯಕ್ಕೆ ಬಳಸಿದ ಮಹಿಂದ್ರ ಸುಪ್ರೋ ವಾಹನ ಸೇರಿ ಒಟ್ಟು 5,50,000 ರೂ. ಮೌಲ್ಯದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿರುತ್ತಾರೆ.
ಆರೋಪಿಯ ವಿರುದ್ಧ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದು ಬಂದಿರುತ್ತದೆ. ಅ.3 ಮತ್ತು 6 ರಂದು ನಡುವೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅ.10 ರಂದು ಪ್ರಕರಣ ದಾಖಲಾಗಿತ್ತು.