ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಮೃತ್ಯು
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಚೆಂಡೆ ನೀರಪಾದೆ ನಿವಾಸಿ ಯಶವಂತ ಯಾನೆ ಚೇತನ್ (35) ಮೃತಪಟ್ಟವರಾಗಿದ್ದಾರೆ.
ಬಿ.ಸಿ.ರೋಡಿನ ಹೋಟೆಲ್ ಕೃಷ್ಣ ವಿಲಾಸದಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದ ಇವರು ಮನೆಯಿಂದ ಬಿ.ಸಿ.ರೋಡಿಗೆ ಬರುತ್ತಿದ್ದ ವೇಳೆ ಸಣ್ಣಕುಕ್ಕು ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.
ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆ ಯಾತ್ರೆಗೆ ತೆರಳಿ ನ.19 ರಂದು ಮನೆಗೆ ಬಂದಿದ್ದರು. ಹಾಗಾಗಿ ರಜೆಯಲ್ಲಿದ್ದ ಚೇತನ್ ಶಬರಿಮಲೆಯಿಂದ ತಂದಿದ್ದ ಪ್ರಸಾದವನ್ನು ಸಂಬಂಧಿಕರ ಮನೆಗೆ ತಲುಪಿಸಿ ಬಳಿಕ ಮನೆಯಲ್ಲಿ ಪದಾರ್ಥಕ್ಕಾಗಿ ಅಂಗಡಿಯಿಂದ ಸಾಮಾನನ್ನು ತಂದು ಕೊಟ್ಟು ಮನೆಯಲ್ಲಿಯೇ ಇದ್ದರು.
ರಾತ್ರಿ ಸುಮಾರು 8 ಗಂಟೆ ವೇಳೆ ಸ್ನೇಹಿತರು ಅವರನ್ನು ಪೋನ್ ಕರೆ ಮಾಡಿ ಪೇಟೆಗೆ ಬರುವಂತೆ ಕರೆದಿದ್ದು, ಮನೆಯಿಂದ ಬೈಕಿನಲ್ಲಿ ಹೊರಟು ಬರುವ ಸಂದರ್ಭದಲ್ಲಿ ಸಣ್ಣಕುಕ್ಕು ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ತಲೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಗೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ವಿವೇಕಾನಂದ ಫ್ರೆಂಡ್ಸ್ ಕ್ಲಬ್ನ ಸಕ್ರೀಯ ಸದಸ್ಯನಾಗಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಪತ್ನಿ, ಮಗಳು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.
ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.