ಕಾರ್ಮಿಕ ವಿರೋಧಿ ಶ್ರಮಶಕ್ತಿ ನೀತಿ-2025 ಕರಡು ಪ್ರತಿ ದಹನ: ಕೇಂದ್ರ ಸರಕಾರದ ವಿರುದ್ಧ ಕಾರ್ಮಿಕರ ಆಕ್ರೋಶ
Wednesday, November 26, 2025
ಮಂಗಳೂರು: ಕೇಂದ್ರದ ನರೇಂದ್ರ ಮೋದಿ ಸರಕಾರವು ನಿರಂತರವಾಗಿ ಕಾರ್ಮಿಕ ವರ್ಗದ ವಿರುದ್ಧ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಶ್ರಮಶಕ್ತಿ ನೀತಿ-2025 ನ್ನು ಜಾರಿಗೊಳಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು,ಇದರ ವಿರುದ್ಧ ಇಂದು ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕೆಂದು CITU ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಅವರು, 1969ರಲ್ಲಿ ಅಂದಿನ ಕೇಂದ್ರ ಸರಕಾರದ ಉಲ್ಲೇಖದ ಮೇರೆಗೆ ಮೊದಲ ರಾಷ್ಟ್ರೀಯ ಕಾರ್ಮಿಕರ ಆಯೋಗವು ಸಂವಿಧಾನದ ನಾಮ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸಲು ಶಾಸನಬದ್ದ ಕ್ರಮಗಳನ್ನು ಶಿಫಾರಸು ಮಾಡಿತ್ತು.ಆದರೆ ಈ ಶ್ರಮಶಕ್ತಿ ನೀತಿಯು ಇದಕ್ಕೆ ಸಂಪೂರ್ಣವಾಗಿ ವಿರುದ್ಧವಾಗುವ ಮೂಲಕ ಸಂವಿಧಾನ ವಿರೋಧಿಯೂ ಆಗಿದೆ.ಇದರ ಭಾಗವಾಗಿಯೇ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ ದೇಶದ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿ ವ್ಯವಸ್ಥೆಯತ್ತ ಕೊಂಡೊಯ್ಯುವ ಹುನ್ನಾರವಾಗಿದೆ ಎಂದು ಹೇಳಿದರು.
CITU ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿಯವರು ಮಾತನಾಡಿ, ನವ ಉದಾರೀಕರಣದ ಈ ವ್ಯವಸ್ಥೆಯಲ್ಲಿ ವಿದೇಶಿ ಮತ್ತು ದೇಶದ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ 4 ಕಾರ್ಮಿಕ ಸಂಹಿತೆಗಳನ್ನು ಸಹ ಉಲ್ಲಂಘಿಸಲು ಶಾಶ್ವತ ಮುಕ್ತ ಅಧಿಕಾರ ನೀಡುವ ಈ ಶ್ರಮಶಕ್ತಿ ನೀತಿಯು ತೀರಾ ಅಪಾಯಕಾರಿಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಕಳೆದ 11 ವರ್ಷಗಳಲ್ಲಿ ಇದೇ ನರೇಂದ್ರ ಮೋದಿ ಸರಕಾರ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಡೆಸದೆ ಕಾರ್ಮಿಕ ವರ್ಗಕ್ಕೆ ಮಹಾದ್ರೋಹವೆಸಗಿದೆ.ಕಾರ್ಮಿಕರ ಹಕ್ಕು ಭಾಧ್ಯತೆಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಿ ಕೋಟ್ಯಾಂತರ ಕಾರ್ಮಿಕರನ್ನು ಬೀದಿಪಾಲು ಮಾಡುವುದೇ ಶ್ರಮಶಕ್ತಿ ನೀತಿಯ ಕುಟಿಲ ಕುತಂತ್ರವಾಗಿದೆ* ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ CITU ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೋಟುರವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಶ್ರಮಶಕ್ತಿ ನೀತಿಯ ಕರಡುಪ್ರತಿಯನ್ನು ಸುಡುವ ಮೂಲಕ ಯಾವುದೇ ಕಾರಣಕ್ಕೂ ಈ ನೀತಿಯನ್ನು ಜಾರಿಗೆ ತರಬಾರದು, ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಜೆ ಬಾಲಕೃಷ್ಣ ಶೆಟ್ಟಿ,ವಸಂತಿ ಕುಪ್ಪೆಪದವು,ಭವ್ಯಾ ಮುಚ್ಚೂರು ,ಜಯಂತ ನಾಯಕ್, ಜಯಂತಿ ಶೆಟ್ಟಿ, ಲಕ್ಷ್ಮಿ ಮೂಡಬಿದ್ರೆ, ಲೋಲಾಕ್ಷಿ ಬಂಟ್ವಾಳ,ಈಶ್ವರಿ ಬೆಳ್ತಂಗಡಿ, ಜಯಲಕ್ಷ್ಮಿ ಜಪ್ಪಿನಮೊಗರು,ಸಂತೋಷ್ ಆರ್ ಎಸ್,ರೈತ ಸಂಘಟನೆಯ ಕೃಷ್ಣಪ್ಪ ಸಾಲ್ಯಾನ್,ಸದಾಶಿವದಾಸ್,DYFI ಜಿಲ್ಲಾ ನಾಯಕರಾದ ರಿಜ್ವಾನ್ ಹರೇಕಳ, ಪ್ರಗತಿಪರ ಚಿಂತಕರಾದ ರಮೇಶ್ ಉಳ್ಳಾಲ ಮುಂತಾದವರು ಭಾಗವಹಿಸಿದ್ದರು.


