ರಾಣಿ ಅಬ್ಬಕ್ಕದೇವಿಗೆ ಇನ್ನಷ್ಟು ಚಾರಿತ್ರಿಕ ಮನ್ನಣೆ ಸಿಗಬೇಕು: ಕಾಮತ್
Saturday, November 15, 2025
ಮಂಗಳೂರು: ಉಳ್ಳಾಲದ ರಾಣಿ ಅಬ್ಬಕ್ಕ ಭಾರತದ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಮೊದಲಿಗೆ ಬರುವ ಹೆಸರು. ಅವಳ ಹೋರಾಟಕ್ಕೆ ಸಿಗಬೇಕಿದ್ದ ಚಾರಿತ್ರಿಕ ಮಹತ್ವ, ಮನ್ನಣೆ ಇನ್ನೂ ಸಿಕ್ಕಿಲ್ಲ. ಇಂದಿನ ಯುವಜನತೆ ಇವರ ಕೊಡುಗೆಗಳಿಂದ ಪ್ರೇರಣೆ ಪಡೆದುಕೊಂಡು ಸಮಾಜಕ್ಕೆ ಪ್ರಯೋಜನಕಾರಿಯಾಗಿ ಬದುಕಲು ಪ್ರಯತ್ನಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಅವರು ಇಂದು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಹಯೋಗದಲ್ಲಿ ನಡೆದ ಅಬ್ಬಕ್ಕ 500 ಉಪನ್ಯಾಸಗಳ ಸರಣಿಯ 94ನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಬ್ಬಕ್ಕ ಜೀವನ-ಸಾಧನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಅವರು, ‘ಅಬ್ಬಕ್ಕನ ಬದುಕಿನ ಘಟನೆಗಳ ಜೊತೆಗೆ ಅವಳ ಹೋರಾಟಗಳ ಹಿಂದಿನ ಸಂದೇಶವನ್ನು ನಾವು ಅರ್ಥಮಾಡಿಕೊಳ್ಳಬೇಕು. ಒಂದು ವೇಳೆ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸದಿದ್ದರೆ ಆಗಬಹುದಾಗಿದ್ದ ಅನಾಹುತವನ್ನು ಊಹಿಸಿಕೊಂಡಾಗ ಅವಳ ಬದುಕಿನ ಮಹತ್ವ ನಮಗೆ ಗೊತ್ತಾಗುತ್ತದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ವಹಿಸಿದ್ದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ. ಜ್ಯೋತಿಪ್ರಿಯಾ ಅತಿಥಿ ಪರಿಚಯ ಮಾಡಿದರು. ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್ ವಂದಿಸಿದರು. ಕೆ.ಆರ್.ಎಮ್.ಎಸ್.ನ ಮಂಗಳೂರು ವಿಭಾಗದ ಡಾ. ಸುಭಾಷಿಣಿ ಶ್ರೀವತ್ಸ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರದಲ್ಲಿ ಪ್ರಕಾಶ್ ಮಲ್ಪೆ ನಿರ್ಮಾಣದ ರಾಣಿ ಅಬ್ಬಕ್ಕ ಕುರಿತಾದ ಕೃತಕ ಬುದ್ಧಿ ಮತ್ತು ತಂತ್ರಜ್ಞಾನ ಆಧರಿತ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.
