ಮಂಗಳೂರಿನಲ್ಲಿ ಯುವ ಮನಸ್ಸುಗಳ ಕ್ರೀಡಾಸಕ್ತಿಗೆ ಸಾಕ್ಷಿಯಾದ ನಮೋ ಚೆಸ್ ಟೂರ್ನಮೆಂಟ್
Sunday, November 23, 2025
ಟೂರ್ನಿಗೆ ಮೆರುಗು ತಂದ ಸಚಿವ ಶ್ರೀಪಾದ ನಾಯಕ್-ಸಂಸದ ಕ್ಯಾ. ಚೌಟ ಅವರ ಚೆಸ್ ಆಟ
ಮಂಗಳೂರು: ಸಂಸದ್ ಖೇಲ್ ಮಹೋತ್ಸವ ಪ್ರಯುಕ್ತ ಮಂಗಳೂರಿನ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನಡೆದ ‘ನಮೋ ಚೆಸ್ ಟೂರ್ನಮೆಂಟ್’ನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಉದ್ಘಾಟಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕಾಗಿ ಫಿಟ್ ಯುವ ಪರಿಕಲ್ಪನೆಯಡಿ ನಡೆದ ಈ ಈ ಚೆಸ್ ಟೂರ್ನಿಯಲ್ಲಿ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೋ ನಾಯಕ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ಇದೇವೇಳೆ ಸಂಸದ ಕ್ಯಾ. ಚೌಟ ಅವರೊಂದಿಗೆ ಸಾಂಕೇತಿಕವಾಗಿ ಚೆಸ್ ಆಟವಾಡಿ ಗಮನಸೆಳೆದರು.
ಈ ನಮೋ ಚೆಸ್ ಟೂರ್ನ ಮೆಂಟ್ನಲ್ಲಿ 10 ವರ್ಷದೊಳಗಿನ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಒಟ್ಟು ಮೂರು ವಿಭಾಗಗಳಲ್ಲಿ ಚೆಸ್ ಮ್ಯಾಚ್ಗಳು ನಡೆದವು. 10 ವರ್ಷದೊಳಗಿನ ಸಬ್ ಜ್ಯೂನಿಯರ್, 15 ವರ್ಷದೊಳಗಿನ ಜ್ಯೂನಿಯರ್ ಹಾಗೂ ಓಪನ್ ಕೆಟಗರಿಯಲ್ಲಿ ನಡೆದ ಈ ಪಂದ್ಯಾಟದಲ್ಲಿ ಸುಮಾರು 500ಕ್ಕೂ ಕ್ರೀಡಾಸಕ್ತ ಯುವ ಮನಸ್ಸುಗಳು ಪಾಲ್ಗೊಂಡು ಪ್ರಧಾನಮಂತ್ರಿ ಮೋದಿ ಅವರ ವಿಕಸಿತ ಭಾರತಕ್ಕಾಗಿ ಫಿಟ್ ಯುವ ಪರಿಕಲ್ಪನೆಯನ್ನು ಅರ್ಥಪೂರ್ಣಗೊಳಿಸಿದರು.
ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರು ಸ್ಪರ್ಧಾಳುಗಳಿಗೆ ಶುಭ ಕೋರಿ, ಕ್ರೀಡೆಗಳು ನಮ್ಮ ಬದುಕಿನ ಒಂದು ಭಾಗ, ಇಂಥಹ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವುದಕ್ಕೂ ಸಹಕಾರಿ. ಹೀಗಿರುವಾಗ, ಮಕ್ಕಳು ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು ತಮ್ಮ ಬದುಕಿನುದ್ದಕ್ಕೂ ಮುಂದುವರಿಸಿಕೊಂಡು ಹೋಗಬೇಕು. ಆ ಮೂಲಕ ಆರೋಗ್ಯಕರ ಸಮಾಜದ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.
ಟೂರ್ನಿ ಉದ್ಘಾಟನೆ ವೇಳೆ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಸಂಸದ್ ಕ್ರೀಡಾ ಮಹೋತ್ಸವದ ಪ್ರಯುಕ್ತ ಈ ನಮೋ ಚೆಸ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ನಮ್ಮ ಜಿಲ್ಲೆಯ ಯುವ ಸಮುದಾಯದಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಮೂಲಕ ಭವಿಷ್ಯದ ಉಜ್ವಲ ಭಾರತಕ್ಕಾಗಿ ಆರೋಗ್ಯ ಪೂರ್ಣ ಫಿಟ್ ಅಂಡ್ ಫೈನ್ ಮಾನವ ಸಂಪತ್ತನ್ನು ಸಜ್ಜುಗೊಳಿಸುವ ಪ್ರಯತ್ನವಿದು. ಇನ್ನು ಪ್ರತಿ ವಾರವು ಸಂಸದ್ ಖೇಲ್ ಮಹೋತ್ಸವ ಅಂಗವಾಗಿ ವಾಲಿಬಾಲ್, ತ್ರೋಬಾಲ್, ಕುಸ್ತಿ, ಕಬ್ಬಡ್ಡಿ, ಹಗ್ಗ-ಜಗ್ಗಾಟ, ಕ್ರಿಕೆಟ್, ಬ್ಯಾಡ್ಮಿಂಟನ್ ಪಂದ್ಯಾಟ ಆಯೋಜಿಸಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಶಾಸಕ ವೇದವ್ಯಾಸ್ ಕಾಮತ್, ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಸುನೀಲ್ ಅಚಾರ್, ಜಿಲ್ಲಾಧ್ಯಕ್ಷ ಅಮರಶ್ರೀ ಶೆಟ್ಟಿ ಭಾಗವಹಿಸಿದ್ದರು.




