ವಿಚಾರಣೆಗೆ ಹಾಜರಾದ ಕಲ್ಲಡ್ಕ ಪ್ರಭಾಕರ ಭಟ್
ಪುತ್ತೂರು: ಪುತ್ತೂರಿನಲ್ಲಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಇಂದು ಕಲ್ಕಡ್ಕ ಪ್ರಭಾಕರ ಭಟ್ ವಿಚಾರಣೆಗೆ ಹಾಜರಾದರು.
ಪುತ್ತೂರು ಗ್ರಾಮಾಂತರ ಠಾಣೆಯ ತನಿಖಾಧಿಕಾರಿ ನೊಟೀಸ್ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದು, ಸದ್ಯ ಪುತ್ತೂರು ಕೋರ್ಟ್ನಲ್ಲಿರೋ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ಮುಗಿಯೋವರೆಗೆ ಬಲವಂತದ ಕ್ರಮ ಬೇಡ ಎಂದು ಕೋರ್ಟ್ ತಿಳಿಸಿದೆ.
ಅ.20 ರಂದು ಪುತ್ತೂರು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಭಟ್, ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುವ ಹೇಳಿಕೆ ನೀಡಿದ ಆರೋಪದಲ್ಲಿ ಈಶ್ವರಿ ಪದ್ಮುಂಜ ಎಂಬವರು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣೆಯಲ್ಲಿ ಆರ್ಎಸ್ಎಸ್ ಮುಖಂಡ ಪ್ರಭಾಕರ ಭಟ್ ವಿರುದ್ಧ BNS 79, 196, 299, 302 ಹಾಗೂ 3(5) ಕಲಂಗಳ ಅಡಿಯಲ್ಲಿ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಅಕ್ಟೋಬರ್ 30 ರಂದು ವಿಚಾರಣೆಗೆ ಹಾಜರಾಗಬೇಕೆಂದು ಕಲಂ:35(3) ಬಿ.ಎನ್.ಎಸ್.ಎಸ್ ಅಡಿ ಪೊಲೀಸರು ನೋಟೀಸು ನೀಡಿದ್ದು, ನಿನ್ನೆ ಕೋರ್ಟ್ಗೂ ನಿರೀಕ್ಷಣಾ ಜಾಮೀನು ನೀಡದಂತೆ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದರು.
ಸದ್ಯ ಅರ್ಜಿ ವಿಚಾರಣೆಯನ್ನು ನವೆಂಬರ್ 10 ಕ್ಕೆ ಕೋರ್ಟ್ ಮುಂದೂಡಿದ್ದು, ಹೀಗಾಗಿ ವಿಚಾರಣೆಗೆ ಹಾಜರಾದ ಆರ್ಎಸ್ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್, ಕೋರ್ಟ್ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿರೋ ಹಿನ್ನೆಲೆಯಲ್ಲಿ ಹೇಳಿಕೆ ದಾಖಲಿಸಿ ಬಿಡುವ ಸಾಧ್ಯತೆ ಇದೆ.