ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಬೇಕು: ದಿವಾಕರ ಕದ್ರಿ
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮತ್ತು ಆಕೃತಿ ಆಶಯ ಪಬ್ಲಿಕೇಷನ್ಸ್ ಮಂಗಳೂರು ಇದರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಸ್ಯ ಪರಿಣಿತ ಮತ್ತು ಛಾಯಾಗ್ರಹಕ ಎಂ ದಿನೇಶ್ ನಾಯಕ್, ವಿಟ್ಲ ಅವರ ಸಸ್ಯ ಸಂಕುಲಗಳ ಪರಿಚಯಾತ್ಮಕ ಕೃತಿ ಸಸ್ಯ ಶ್ಯಾಮಲಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಮಕ್ಕಳು ಹೆಚ್ಚಾಗಿ ಕೌಶಲ್ಯ ಬೆಳೆಸಿಕೊಂಡರೆ ಮಾತ್ರ ಸ್ವತಂತ್ರವಾಗಿ ಬದುಕಲು ಸಾಧ್ಯ. ಕೇವಲ ಸಾಮಾಜಿಕ ಜಾಲತಾಣಗಳ ದಾಸರಾಗಬೇಡಿ ಎಂದು ಸಲಹೆ ನೀಡಿದರು. ಕೃತಿಯ ಲೇಖಕ ಎಂ. ದಿನೇಶ್ ನಾಯಕ್, ವಿಟ್ಲ ತಾಯಿ ರೂಪದಲ್ಲಿ ದೇಶವನ್ನು ಕಾಣುವ ಪರಂಪರೆ ನಮ್ಮಲ್ಲಿ ಮಾತ್ರ ಇದೆ. ಒಳ್ಳೆಯ ಕಾರ್ಯಗಳನ್ನು ಮಾಡುವ ಮುನ್ನ ಅದರ ಕುರಿತು ಜ್ಞಾನವಿರಬೇಕು. ಮನುಷ್ಯ ಎಷ್ಟೇ ದೊಡ್ಡವನಾದರೂ ನಿರ್ಲಕ್ಷ್ಯ ಮಾಡದೇ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆ ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿ ಸರಕಾರಿ ಶಿಕ್ಷಕ ಶಿಕ್ಷಣ ವಿದ್ಯಾಲಯದ ಉಪನ್ಯಾಸಕಿ ಡಾ. ಉಷಾ ಎನ್. ಮಾತನಾಡಿ, ಪರಿಸರಕ್ಕೆ ಹತ್ತಿರವಾದಷ್ಟು ಆರೋಗ್ಯಕರವಾಗಿರಲು ಸಾಧ್ಯ. ಪರಿಸರ ಮತ್ತು ನಮ್ಮ ನಡುವಿನ ಸಂಬಂಧವನ್ನು ಮೊದಲು ತಿಳಿದುಕೊಳ್ಳಬೇಕು. ದಟ್ಟ ಹಸಿರು ಕಂಗೊಳಿಸಿದಾಗ ಮಾತ್ರ ಉತ್ತಮ ಫಲ ಜಲ ವಾಯುವನ್ನು ಪಡೆಯಲು ಸಾಧ್ಯ. ನಾವೆಲ್ಲರೂ ವನಮಹೋತ್ಸವ ಆಚರಣೆಯನ್ನು ನಿಜವಾದ ಅರ್ಥದಲ್ಲಿ ಆಚರಿಸಿದರೆ, ಸಾಕಷ್ಟು ಮರಗಳಿಗೆ ಜೀವ ನೀಡಬಹುದು. ಆದರೆ ಪ್ರಸ್ತುತ ದಿನಗಳಲ್ಲಿ ವನಮಹೋತ್ಸವ ಒಣ ಮಹೋತ್ಸವವಾಗಿ ಬದಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ ಎಸ್., ಸಸ್ಯ ಶ್ಯಾಮಲಾ ಕೃತಿಯಲ್ಲಿ ನೂರೊಂದು ಸಸ್ಯಗಳ ಕುರಿತು ಮಾಹಿತಿ ಇದೆ. ಜೀವನ ಮತ್ತು ಜ್ಞಾನ ಎರಡು ಬೇರೆ ಬೇರೆಯಾಗಿದೆ. ಜ್ಞಾನದ ಸಂರಕ್ಷಣೆ ಮತ್ತು ಬೆಳವಣಿಗೆ ಜವಾಬ್ದಾರಿ ಎಲ್ಲರ ಮೇಲಿದೆ. ಸಸ್ಯಗಳು ಮನುಷ್ಯ ಸಂಕುಲಕ್ಕೆ ಸಹಾಯ ಮಾಡುತ್ತವೆ. ನಿಸರ್ಗಕ್ಕಿಂತ ದೊಡ್ಡದು ಬೇರೊಂದು ಇಲ್ಲ. ಹೀಗಾಗಿ ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಣತೊಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಸಸ್ಯ ಶ್ಯಾಮಲ ಕೃತಿ ಲೇಖಕ ಎಂ. ದಿನೇಶ್ ನಾಯಕ್ ವಿಟ್ಲ, ದಂಪತಿಗೆ ಅಭಿನಂದನಾ ಸನ್ಮಾನ ಮಾಡಲಾಯಿತು. ಆಕೃತಿ ಪಬ್ಲಿಕೇಶನ್ ನ ಪ್ರಕಾಶಕ ಕಲ್ಲೂರು ನಾಗೇಶ್ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಶೋಭಾ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್, ಆಂತರಿಕ ಗುಣಮಟ್ಟ ಖಾತ್ರಿಕೋಶದ ಸಂಯೋಜಕ ಡಾ. ಸಿದ್ದರಾಜು ಎಂ.ಎನ್., ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.