ಸುಬ್ರಹ್ಮಣ್ಯದಲ್ಲಿ ಏಡ್ಸ್ ಜನ ಜಾಗೃತಿ ಆಂದೋಲನ
Thursday, December 4, 2025
ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಇವರ ಸಂಯುಕ್ತ ಆಶಯದಲ್ಲಿ ಜಾನಪದ ಕಲಾತಂಡಗಳ ಮೂಲಕ ಹೆಚ್ಐವಿ ಏಡ್ಸ್ ಜನ ಜಾಗೃತಿ ಆಂದೋಲನ ಬುಧವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.
ಅದಕ್ಕೂ ಮೊದಲು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಕೆಎಸ್ಎಸ್ ಕಾಲೇಜಿನ ಆವರಣದಲ್ಲಿ ಪ್ರದರ್ಶನವನ್ನು ಮಾಡಿದ್ದರು.
ಮಂಡ್ಯದ ನಿತ್ಯ ಸ್ನೇಹಿತ ಕಲಾತಂಡ ಅಧ್ಯಕ್ಷ ಎಚ್.ಪಿ. ವೈರಮುಡಿ ಹಾಗೂ ಸದಸ್ಯರುಗಳಾದ ಯರಹಳ್ಳಿ ಹೊನ್ನೇಶ್, ಬಸವರಾಜು, ಪ್ರತಾಪ್, ವಿನುತ ಹಾಗೂ ಪೂಜಾ ಅವರನ್ನು ಒಳಗೊಂಡ ತಂಡ ಬೀದಿ ನಾಟಕದ ಮೂಲಕ ಜನ ಜಾಗೃತಿಯನ್ನು ಪ್ರಸ್ತುತಪಡಿಸಿದರು.
ಸುಬ್ರಹ್ಮಣ್ಯದ ವಿವಿಧ ಸಂಘಟನೆಗಳಾದ ಮಹಿಳಾ ಸಂಘ, ಸಂಜೀವಿನಿ ಒಕ್ಕೂಟ, ವಾಣಿ ವನಿತಾ ಸಂಘ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿ ಹಾಗೂ ನೌಕರರು, ಸಾರ್ವಜನಿಕರು ಉಪಸ್ಥಿತರಿದ್ದರು.
ಮಂಡ್ಯದ ನಿತ್ಯ ಸ್ನೇಹಿ ಸಾಂಸ್ಕೃತಿಕ ಕಲಾತಂಡದ ಅಧ್ಯಕ್ಷ ಎಚ್.ಪಿ. ವೈರಮುಡಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಸಾರ್ವಜನಿಕರ ಪರವಾಗಿ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ವಂದಿಸಿದರು.

