ದೇವಸ್ಥಾನ ಮುಂದೆ ದಫ್ ಪ್ರದರ್ಶನಕ್ಕೆ ಹಿಂದೂ ಸಂಘಟನೆಗಳ ವಿರೋಧ: ದಫ್ ರದ್ದು
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಡಿ.25 ಮತ್ತು 26 ರಂದು ನಡೆಯಲಿರುವ ಕೆವಿಜಿ ಸುಳ್ಯ ಹಬ್ಬ-2025 ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಾಂಸ್ಕ್ರತಿಕ ಕಾರ್ಯಕ್ರಮ ’ದಫ್ ಪ್ರದರ್ಶನ’ ಆಯೋಜನೆಗೆ ನಿರ್ಧರಿಸಿ ಆಮಂತ್ರಣ ತಯಾರಿಸಲಾಗಿತ್ತು.
ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗ ನಡೆಯಲಿದ್ದ ದಫ್ ಪ್ರದರ್ಶನ ಬಗ್ಗೆ ವಿಶ್ವ ಹಿಂದು ಪರಿಷತ್ ಬಜರಂಗದಳ ಹಾಗೂ ಹಿಂದುತ್ವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ದೇವಸ್ಥಾನದ ಮುಂಭಾಗ ದಫ್ ಪ್ರದರ್ಶನ ಮಾಡಿದರೆ ಮಸೀದಿ ಮುಂದೆ ಹನುಮಾನ್ ಚಾಲೀಸ್ ಪಠಣ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದರು.
ಈ ಎಲ್ಲ ಬೆಳವಣಿಗೆಯ ಹಿನ್ನಲೆಯಲ್ಲಿ ದೇವಸ್ಥಾನದ ಮುಂದೆ ದಫ್ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಸರಕಾರಕ್ಕೆ ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿ ಹಿನ್ನಲೆಯಲ್ಲಿ ದಫ್ ಪ್ರದರ್ಶನಕ್ಕೆ ಅವಕಾಶ ನೀಡಿದ್ದಲ್ಲಿ ಕರಾವಳಿಯಲ್ಲಿ ವಿವಾದ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂಬ ಮುಂಜಾಗ್ರತಾ ಕ್ರಮವಾಗಿ ಹಾಗೂ ಹಿಂದುತ್ವ ಸಂಘಟನೆಗಳ ಒತ್ತಡದ ಬಳಿಕ ದಫ್ ಪ್ರದರ್ಶನವನ್ನು ಆಯೋಜಕರು ಕೈಬಿಟ್ಟಿದ್ದಾರೆ.