ನೀಲಾವರದಲ್ಲಿ ಅಗ್ನಿ ಅವಘಡ
Thursday, January 8, 2026
ಕುಂದಾಪುರ: ಬ್ರಹ್ಮಾವರ ತಾಲೂಕು ನೀಲಾವರದಲ್ಲಿ ರಸ್ತೆ ಬದಿಗೆ ಭಾರೀ ಬೆಂಕಿ ಹತ್ತಿಕೊಂಡು ಜನರು ಆತಂಕಕ್ಕೊಳಗಾಗಿದ್ದಾರೆ. ಮಟಪಾಡಿ ಗ್ರಾಮದಿಂದ ನೀಲಾವರ ಕಡೆ ಹೋಗುವ ಮಾರ್ಗದ ಅಕ್ಕ ಪಕ್ಕದ ರಸ್ತೆಗಳಲ್ಲಿ ಬೆಂಕಿ ಅಬ್ಬರ ಜೋರಾಗಿತ್ತು. ಜೆನಿತ್ ಡೈ ಮೇಕರ್ ಇಂಡಸ್ಟ್ರಿ ಸಮೀಪದ ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಹಬ್ಬಲಾರಂಭಿಸಿದೆ. ಪರಿಸರದಲ್ಲಿದ್ದ ಪೈನಾಪಲ್ ತೋಟ ಹಾಗೂ ಒಣಹುಲ್ಲು, ಗಿಡ ಗಂಟಿಗಳು ಬೆಂಕಿಗೆ ಆಹುತಿಯಾಗಿವೆ. ಪರಿಸರದ ಅಡಿಕೆ ತೋಟ, ತೆಂಗು, ಹಲಸು ಗಿಡಗಳು ಕೂಡ ಸುಟ್ಟು ಹೋಗಿವೆ.
ಪರಿಸರದಲ್ಲಿ ಸಣ್ಣಪುಟ್ಟ ಕೈಗಾರಿಕೆಗಳಿದ್ದು ಸಕಾಲದಲ್ಲಿ ಅಗ್ನಿ ಶಮನ ಕಾರ್ಯಾಚರಣೆ ನಡೆಸಿದ ಕಾರಣ ಯಾವುದೇ ಭಾರೀ ಅಪಾಯ ಸಂಭವಿಸಿಲ್ಲ. ಸ್ಥಳೀಯರು ಮತ್ತು ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಅನಾಹುತ ತಪ್ಪಿದೆ. ರಸ್ತೆಯ ಬದಿಗಳಲ್ಲಿ ಕಳೆ ಹುಲ್ಲು ಒಣಗಿ ನಿಂತಿದ್ದು, ಯಾರೋ ಬೀಡಿ ಸೇದಿ ಎಸೆದ ಕಾರಣದಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಊಹಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ರಹ್ಮಾವರ ಪರಿಸರದಲ್ಲಿ ಪದೇ ಪದೇ ಅಗ್ನಿ ಅವಘಡಗಳು ಸಂಭವಿಸುತ್ತಿದ್ದು ತಾಲೂಕು ಕೇಂದ್ರದಲ್ಲಿ ಶಾಶ್ವತ ಅಗ್ನಿಶಾಮಕ ಠಾಣೆ ಬೇಕೆಂಬ ಬೇಡಿಕೆ ಹೆಚ್ಚಿದೆ. ಯಾವುದೇ ಅವಘಡ ಸಂಭವಿಸಿದರೂ ಉಡುಪಿಯಿಂದ ಅಥವಾ ಕೋಟೇಶ್ವರದಿಂದ ಅಗ್ನಿಶಾಮಕ ವಾಹನ ಬರಬೇಕಾಗಿದೆ.