ಕುಂದಾಪುರದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ
Thursday, January 8, 2026
ಕುಂದಾಪುರ: ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಹಾಗೂ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳವರ ದೈವಜ್ಞ ದರ್ಶನ ಕಾರ್ಯಕ್ರಮವು ಜ.7 ರಂದು ಬೆಳಗ್ಗೆ ಕುಂದಾಪುರದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ನಡೆಯಿತು.
ಅಂದು ಶ್ರೀಗಳನ್ನು ದೈವಜ್ಞ ಬ್ರಾಹ್ಮಣ ಸಮಾಜದ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಸಂಗಮ್ ಸರ್ಕಲ್ನಿಂದ ಸಮಾಜ ಬಾಂಧವರು ಬೈಕ್ ರ್ಯಾಲಿ ಮುಖೆನ ಕರ್ಕಿ ಶ್ರೀ ಜ್ಞಾನೇಶ್ವರಿ ಪೀಠದ ಜಗದ್ಗುರುಗಳನ್ನು ಶಾಸ್ತ್ರಿ ವೃತ್ತದಲ್ಲಿ ಬರಮಾಡಿಕೊಂಡು ಸರ್ಕಲ್ನಿಂದ ಪುರಮೆರವಣಿಗೆಯೊಂದಿಗೆ ಮಹಿಳೆಯರ ನೃತ್ಯ ಭಜನೆ, ಚೆಂಡೆವಾದನ, ವಿಶೇಷ ಟ್ಯಾಬ್ಲೊದೊಂದಿಗೆ ಶೋಭಾ ಯಾತ್ರೆಯು ಹಳೆ ಬಸ್ ನಿಲ್ದಾಣದ ಮಾಸ್ತಿ ಕಟ್ಟೆಯ ಮೂಲಕ ತಿರುಗಿ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಆಗಮಿಸಿತು.
ಶ್ರೀಗಳು ವಿಶೇಷ ಮಂಗಳಾರತಿಯನ್ನು ಶ್ರೀ ಲಕ್ಷ್ಮೀ ನಾರಾಯಣ ದೇವರಿಗೆ ಅರ್ಪಿಸುವ ಮೂಲಕ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದ ಬಳಿಕ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಶ್ರೀ ಗುರುಗಳ ಪಾದುಕಾ ಪೂಜೆಯನ್ನು ನಾಗರಾಜ್ ಶೇಟ್ ಮತ್ತು ದಂಪತಿಗಳು ನೆರವೇರಿಸಿದರು. ಶ್ರೀ ಗುರುಗಳಿಗೆ ಫಲ-ಪುಷ್ಪ ಸಮರ್ಪಣೆ ನೆರವೇರಿದ ನಂತರ ಶ್ರೀ ಸ್ವಾಮೀಜಿಗಳವರಿಂದ ಆಶೀರ್ವಚನ ನುಡಿ ನಡೆಯಿತು.
ಕರ್ಪೂರದಂತೆ ಸ್ವತಃ ದಹಿಸಿ ಬೆಳಕು ನೀಡುವ ಸ್ವಭಾವ ನಮ್ಮ ತ್ಯಾಗದ ಮೂಲಕ ಸಮಾಜಕ್ಕೆ ತಿಳಿಯಬೇಕು. ‘ನಮ್ಮದು ದೈವಜ್ಞ ಬ್ರಾಹ್ಮಣ ಅತ್ಯಂತ ಶ್ರೇಷ್ಠ ಸಮಾಜ, ಇಲ್ಲಿ ಎಲ್ಲರೂ ಸದಾಚಾರ ವಂತರಾಗಿರಬೇಕು, ನಮ್ಮ ಸನಾತನ ಸಂಸ್ಕೃತಿ ಮತ್ತು ಸಂಸ್ಕಾರಗಳು ತಾಯಂದಿರಿಂದಾಗಿ ಉಳಿದುಕೊಂಡಿದೆ, ನಮ್ಮ ಸಂಸ್ಕಾರಗಳು ಉತ್ತಮವಾಗಿದ್ದರೆ ಮಾತ್ರ ಸರ್ವಾಂಗೀಣ ವಿಕಾಸವಾಗುತ್ತದೆ ಎಂದ ಅವರು ಹೊನ್ನಾವರದ ಕರ್ಕಿಯ ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.
ಶ್ರೀ ಕರ್ಕಿ ಮಠದ ಕಿರಿಯ ಶ್ರೀಗಳಾದ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರು, ಸಂತೃಪ್ತಿ ಇಲ್ಲದ ಅತಿಯಾಸೆಯ ಜೀವನ ದುಃಖಕ್ಕೆ ಕಾರಣವಾಗುತ್ತದೆ ಎಂದರು. ಹೊನ್ನಾವರ ಶ್ರೀ ಕರ್ಕಿ ಮಠದ ಯೋಗೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಲಕ್ಷ್ಮೀನಾರಾಯಣ ದೇವಳದ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಕುಲ್ ಶೇಟ್, ಕುಂದಾಪುರ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಭಾಕರ ಶೇಟ್, ಮಹಿಳಾ ಮಂಡಲ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷೆ ಗೀತಾ ವಿ. ಶೇಟ್ ಉಪಸ್ಥಿತರಿದ್ದರು.
ಸಮುದಾಯದ ಹಲವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಾಗರಾಜ ಶೇಟ್ ಸ್ವಾಗತಿಸಿದರು. ಭಾಸ್ಕರ್ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.
ಸಮಾಜ ಬಾಂಧವರಿಂದ ಗುರುಗಳಿಗೆ ಫಲ-ಪುಷ್ಪ ಸಮರ್ಪಣೆ, ಸ್ವಾಮೀಜಿಗಳವರಿಂದ ಭಕ್ತಾದಿಗಳಿಗೆ ಮಂತ್ರಾಕ್ಷತೆ ವಿತರಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.






