ಬಜೆಟ್ ನಲ್ಲಿ ಮಂಗಳೂರು ದಸರಾಗೆ 5 ಕೋಟಿ: ಮುಖ್ಯಮಂತ್ರಿಗಳಿಗೆ ಶಾಸಕ ಕಾಮತ್ ಮನವಿ
ಮೈಸೂರು ನಂತರ ರಾಜ್ಯದಲ್ಲೇ ಅತೀ ಹೆಚ್ಚು ಜನ ಸೇರುವ ಹಬ್ಬ ಮಂಗಳೂರು ದಸರಾ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರಗಳು ನಾಡಿನ ಭಕ್ತರಿಂದ ತುಂಬಿರುತ್ತವೆ. ರಾಜ್ಯ ಸರ್ಕಾರ ಬಜೆಟ್ ನಲ್ಲಿ 5 ಕೋಟಿ ಘೋಷಣೆ ಮಾಡಿದರೆ ಇನ್ನಷ್ಟು ವಿಜೃಂಭಣೆಯಿಂದ ದಸರಾ ಆಯೋಜನೆ ಮಾಡಬಹುದಾಗಿದ್ದು ಹಬ್ಬದ ಸಂಭ್ರಮವೂ ಹೆಚ್ಚಲಿದೆ. ದಯವಿಟ್ಟು ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮಗೊಳ್ಳಿ ಎಂದು ಶಾಸಕರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಈ ಹಿಂದೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ, ದಸರಾ ವೇಳೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಆರಂಭವಾಗಿ ಮಂಗಳಾದೇವಿ, ಉರ್ವ ಮಾರಿಗುಡಿ, ಕಾರ್ ಸ್ಟ್ರೀಟ್, ಡೊಂಗರಕೇರಿ, ಹೀಗೆ ಇಡೀ ನಗರಕ್ಕೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂದು ಚಿಂತನೆ ನಡೆಸಿದ ಶಾಸಕ ಕಾಮತ್ ರವರು, ಅಂದಿನ ಮೇಯರ್, ಕಾರ್ಪೊರೇಟರ್, ಸ್ಥಾಯಿ ಸಮಿತಿ ಸದಸ್ಯರು, ಜಿಲ್ಲಾಧ್ಯಕ್ಷರ ಸಹಿತ ಎಲ್ಲರ ಸಹಕಾರದೊಂದಿಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಇದರಿಂದಾಗಿ ದೇವಸ್ಥಾನಗಳಿಗೆ ದೀಪಾಲಂಕಾರಕ್ಕಾಗಿಯೇ ವರ್ಷಕ್ಕೆ ಸುಮಾರು 50 ರಿಂದ 60 ಲಕ್ಷದವರೆಗಿನ ಬಹುದೊಡ್ಡ ಆರ್ಥಿಕ ಹೊರೆಯಾಗುವುದು ತಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದು.