ರಾಜಕೀಯದಲ್ಲಿ ಕುಲಾಲ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗಬೇಕು: ಸದಾಶಿವ ಬಂಗೇರ
ಮಂಗಳೂರು: ರಾಜಕೀಯದಲ್ಲಿ ಕುಲಾಲ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟು ಇರುವ ಕುಲಾಲ/ಕುಂಬಾರರಿಗೆ ಇಲ್ಲಿಯವರೆಗೆ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಇದು ಕುಲಾಲ ಕುಂಬಾರರ ಸಮಾಜಕ್ಕೆ ಅತೀ ದೊಡ್ಡ ಅನ್ಯಾಯ ಎಂದರು.
ನಮ್ಮ ಸಮಾಜದ ಜನಸಂಖ್ಯೆಯನ್ನು ಪರಿಗಣಿಸಿ ಆಯಾ ರಾಜಕೀಯ ಪಕ್ಷದಲ್ಲಿ ಇರುವವರು ಕುಲಾಲ/ಕುಂಬಾರರನ್ನು ಪರಿಗಣಿಸಿ ಗೌರವ ಸ್ಥಾನಮಾನವನ್ನು ನೀಡಬೇಕು. ಮುಂದೆ ನಡೆಯುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕೂಡ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ನಮ್ಮನ್ನು ಪರಿಗಣಿಸಬೇಕು. ವಿಧಾನಸಭೆ, ಪರಿಷತ್ ಹಾಗೂ ಸಂಸತ್ ಚುನಾವಣೆಯಲ್ಲಿಯೂ ಸೂಕ್ತ ಸ್ಥಾನಮಾನ ಸಿಗಬೇಕು ಎಂದವರು ಆಗ್ರಹಿಸಿದರು.
ದೇವರಾಜ ಅರಸು ನಿಗಮದಲ್ಲಿ 103 ಜಾತಿಗಳನ್ನು ಸೇರಿದ 600ರಿಂದ 700 ಕೋ.ರೂ ಅನುದಾನ ಕೊಡುತ್ತಿರುವ ಸರಕಾರ ಕುಲಾಲ ಕುಂಬಾರರಿಗೆ ಅನುದಾನ ನೀಡುತ್ತಿಲ್ಲ. ಹೀಗಾಗಿ ನಮ್ಮ ಅಭಿವೃದ್ದಿ ನಿಗಮದೊಂದಿಗೆ 250 ಕೋ.ರೂ. ಅನುದಾನ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಪದಾಧಿಕಾರಿಗಳಾದ ಮಂಜಪ್ಪ ಬಿಜೈ, ರಾಜೇಂದ್ರ ಕುಮಾರ್, ಟಿ.ಶೇಷಪ್ಪ ಮೂಲ್ಯ, ವಿಶ್ವನಾಥ ಬಂಗೇರ ಕುಳಾಯಿ, ಸೋಮಯ್ಯ ಹನೈನಡೆ, ಗಿರೀಶ್ ಎಂ.ಪಿ.ಕುತ್ತಾರ್, ದೇವಪ್ಪ ಕುಲಾಲ್ ಪಂಜಿಕಲ್ಲು ಉಪಸ್ಥಿತರಿದ್ದರು.