ಸಿದ್ದರಾಮಯ್ಯರ ಜೊತೆಯಲ್ಲಿ ಉನ್ನತ ಹುದ್ದೆಯಲ್ಲಿರುವುದು ಸಂತೋಷದ ವಿಚಾರ: ಸ್ಪೀಕರ್ ಯು.ಟಿ. ಖಾದರ್
Wednesday, January 7, 2026
ಮಂಗಳೂರು: ದೇವರಾಜ್ ಅರಸ್ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆ ನನ್ನ ತಂದೆ ಯು.ಟಿ. ಫರೀದ್ ಶಾಸಕರಾಗಿ ಜೊತೆಗಿದ್ದರು. ಈಗ ಸಿದ್ದರಾಮಯ್ಯರವರು ದೀರ್ಘಕಾಲ ಮುಖ್ಯಮಂತ್ರಿಯಾಗಿರುವಾಗ ಅವರ ಜೊತೆ ನಾನು ಉನ್ನತ ಹುದ್ದೆಯಲ್ಲಿರುವುದು ಸಂತೋಷದ ವಿಚಾರ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ರಾಜ್ಯದ ದೀರ್ಘಾವದಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸುತ್ತಿರುವ ಸಿದ್ದರಾಮಯ್ಯನವರಿಗೆ ಶುಭಾಶಯ ತಿಳಿಸಿದರು.
ರಾಜ್ಯದ ರಾಜಕೀಯದಲ್ಲಿ ಕಾಲಘಟ್ಟವನ್ನು ಸ್ಥಾಪಿಸಿದವರು ನೀವು. ಸಿದ್ದರಾಮಯ್ಯನವರ ಕಾಲ ಎಂದು ಜನ ಗರ್ವದಿಂದ ಹೇಳಿಕೊಳ್ಳುವ ಅವಧಿ ಕೊಟ್ಟಿದ್ದೀರಿ. ನಿಮ್ಮ ಅವಧಿಯಲ್ಲಿ ನಾವು ಜೊತೆಗಿದ್ದೆವು ಎಂಬುದು ನಮಗೂ ಹೆಮ್ಮಯ ವಿಷಯ. ಈ ಹಿಂದೆ ದೇವರಾಜ್ ಅರಸು ಅವರು ದಾಖಲೆ ಮಾಡಿದ್ದ ಸಂದರ್ಭದಲ್ಲಿ ನಮ್ಮ ತಂದೆ ಫರೀದ್ ಅವರ ಜೊತೆ ಶಾಸಕರಾಗಿ ಕೆಲಸ ಮಾಡಿದ್ದರು.
ಈಗ ನಿಮ್ಮ ಜೊತೆ ನಾನು ಸಹ ಉನ್ನತ ಜವಾಬ್ದಾರಿ ನಿರ್ವಹಿಸುತ್ತಿರುವುದು ಖುಷಿಯ ವಿಚಾರ. ಒಡೆಯುವ ಈ ಜಗತ್ತಿನಲ್ಲಿ ನೀವು ಒಂದಾಗಿಸುವವರಿಗೆ ನಾಯಕತ್ವ ನೀಡಿದ್ದಿರಿ. ನೀವು ಹಿಡಿದಿರುವ ಸಮಾನತೆಯ ಹಣತೆಗೆ ನಾವು ಕೈಜೋಡಿಸುತ್ತೇವೆ. ಶೋಷಿತ ಪೀಡಿತ ಹಾಗೂ ದಮನಿತರ ಪರ ನಿಮ್ಮ ದನಿಗೆ ನಾವು ದನಿಗೂಡಿಸುತ್ತೇವೆ. ಈ ಸುಸಂದರ್ಭದಲ್ಲಿ ಸಮಾನತೆಯ ಸಮಾಜದ ಪಣ ಇನ್ನಷ್ಟು ಗಟ್ಟಿಗೊಳಸೋಣ ಎಂದು ಹೇಳಿದರು.