ಕ್ರಿಸ್ತರಾಜ ದೇವಾಲಯವನ್ನು ಕೆಡಹುವ ಮೂಲಕ ಭಕ್ತರ ಧಾರ್ಮಿಕ ಭಾವನೆಗೆ ಘಾಸಿ
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1953ರಲ್ಲಿ ಫಾ.ಲಾರೆನ್ಸ್ ಎಸ್. ಪಾಯ್ಸ್ ಅವರ ನೇತೃತ್ವದಲ್ಲಿ ರೋಮನ್ ಗೋಥಿಕ್ ಶೈಲಿಯಲ್ಲಿ ಅತ್ಯಂತ ಕಲಾತ್ಮಕವಾಗಿ ರಚನೆಗೊಂಡಿತ್ತು. ಇದನ್ನು ಕೆಡಹುವ ಬದಲು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತು. ಶಿಲುಬೆ ಇರುವಾಗಲೇ ದೇವಾಲಯವನ್ನು ನೆಲಸಮ ಮಾಡಿರುವುದು ಭಕ್ತರಿಗೆ ನೋವನ್ನುಂಟು ಮಾಡಿದೆ ಎಂದರು.
ಪ್ರಸ್ತುತದ ಪಾದ್ರಿ ವಿಶಾಲ್ ಮೊನಿಸ್ ಅವರ ನೇತೃತ್ವದಲ್ಲಿ ಈಗಾಗಲೇ ಹೊಸ ದೇವಾಲಯದ ನಿರ್ಮಾಣ ಕಾರ್ಯ ಬೇರೆ ಸ್ಥಳದಲ್ಲಿ ನಡೆಯುತ್ತಿದೆ. ಹೊಸ ಕಟ್ಟಡಕ್ಕೆ ಹಳೆಯ ಭವ್ಯ ಕಟ್ಟಡದಿಂದ ಯಾವುದೇ ತೊಡಕು ಇರಲಿಲ್ಲ. ಆದರೆ ಸಮಿತಿಯ ಸ್ವಾರ್ಥದಿಂದಾಗಿ ಭವ್ಯವಾದ ಅತ್ಯಂತ ಪುರಾತನ ದೇವಾಲಯವನ್ನು ನೆಲಸಮ ಮಾಡಲಾಗಿದೆ. ಇದರೊಂದಿಗೆ ಅದ್ಭುತ ವಾಸ್ತುಶೈಲಿಯ, ಕಲಾತ್ಮಕ ಮಂದಿರ ಧರೆಗುರುಳಿದೆ ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.
ಚರ್ಚ್ ಕಟ್ಟಡವು ಉರುಳಿಸಿದ ರೀತಿಯೂ ಆಘಾತಕಾರಿಯಾದುದು. ಶಿಲುಬೆ ಕ್ರೈಸ್ತರ ಬಹುಮುಖ್ಯ ಪವಿತ್ರ ಧಾರ್ಮಿಕ ಗುರುತಾಗಿದ್ದು, ಅದಕ್ಕೆ ಕನಿಷ್ಟ ಗೌರವವನ್ನೂ ಕೊಡದೆ ಉರಿಳಿಸಿದ ರೀತಿ ನೋವನ್ನುಂಟು ಮಾಡಿದೆ. ಇದಕ್ಕೆ ಚರ್ಚ್ ಸಮಿತಿ ಹಾಗೂ ಮಂಗಳೂರು ಬಿಷಪರು ಉತ್ತರ ನೀಡಬೇಕು. ಇಲ್ಲವಾದಲ್ಲಿ ಬಿಷಪ್ ನಿವಾಸದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ವಿಲ್ಸನ್ ಜೆ.ಪಿ ಡಿಸೋಜ, ಅನೀಶ್ ಸುವಾರಿಸ್, ಆನ್ಸ್ಟನ್ ಸುವಾರಿಸ್, ಆಸ್ವಾಲ್ಡ್ ಡಿಸೋಜ, ಪ್ರಕಾಶ್ ನೊರೊನ್ಹಾ ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಸ್ಪಷ್ಟನೆ..
ಕಯ್ಯಾರ ಕ್ರಿಸ್ತ ದೇವಾಲಯವನ್ನು ಸರ್ಕಾರಿ ಆದೇಶದಂತೆಯೇ ಕಡವಲಾಗಿದೆ. ಪೈವಳಿಕೆ ಪಂಚಾಯತ್ಗೆ ಚರ್ಚಿನ ಹಳೆ ಕಟ್ಟಡವನ್ನು ಪರಿಶೀಲಿಸಿ ಫಿಟ್ನೆಸ್ ರಿಪೋರ್ಟ್ ಕೇಳಿದ್ದೆವು. ಆದರೆ ಕಟ್ಟಡಕ್ಕೆ ಯಾವುದೇ ರೀತಿಯ ಸಕಾರಾತ್ಮಕ ವರದಿ ನೀಡಲು ಸಾಧ್ಯವಿಲ್ಲಲ್ಲ; ಕಟ್ಟಡ ಶಿಥಿಲಗೊಂಡಿದ್ದು, ತೆರವುಗೊಳಿಸಲು ನಿರಪೇಕ್ಷಣಾ ಪ್ರಮಾಣ ಪತ್ರ ನೀಡಿದ್ದರು. ಕಟ್ಟಡ ತೀವ್ರ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಶಿಲುಬೆ ತೆಗೆಯಲು ಸರ್ವ ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಶಿಲುಬೆ ಕೆಳಗೆ ಬೀಳುವುದರ ಬಗ್ಗೆ ವೀಡಿಯೋಹರಿದಾಡುತ್ತಿರುವುದು ವಿಷಾದನೀಯ. ಧರ್ಮಗುರುಗಳನ್ನು ತಪ್ಪಿತಸ್ಥರನ್ನಾಗಿ ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಚರ್ಚ್ ಆರ್ಥಿಕ ಸಮಿತಿ ಮತ್ತು ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಶನ್ ಡಿಸೋಜ ಹಾಗೂ ಕಾರ್ಯದರ್ಶಿ ಜೋಸ್ವಿರ್ ಡಿಸೋಜ ಸ್ಪಷ್ಟೀಕರಣ ನೀಡಿದ್ದಾರೆ.