ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ
Saturday, February 21, 2026
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ)ನಲ್ಲಿ ವ್ಯವಹಾರ ನಿರ್ವಹಣಾ ವಿಭಾಗವು ಇನ್ಸ್ಟಿಟ್ಯೂಷನ್ಸ್ ಇನೋವೇಶನ್ ಕೌನ್ಸಿಲ್ ಸಹಯೋಗದಲ್ಲಿ ವಿನ್ಯಾಸ ಚಿಂತನೆ, ವಿಮರ್ಶಾತ್ಮಕ ಚಿಂತನೆ ಮತ್ತು ನಾವೀನ್ಯತೆ ವಿನ್ಯಾಸದ ಕುರಿತು ಸಾಮರ್ಥ್ಯ ವೃದ್ಧಿ ಕಾರ್ಯಾಗಾರ ಪಿಜಿ ಸೆಮಿನಾರ್ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವೊಕೇಟ್ ಅಶ್ವಿನ್ ಎಲ್. ಶೆಟ್ಟಿ ಅವರು ಡಿಸೈನ್ ಥಿಂಕಿಂಗ್ನ ವಿವಿಧ ಆಯಾಮಗಳನ್ನು ತಿಳಿಸಿದರು. ಪ್ರಕೃತಿಯನ್ನು ಸೂಕ್ಷ್ಮತೆಯಿಂದ ಅರಿಯುವ ಪ್ರಯತ್ನ ಮತ್ತು ಕ್ರಿಯಾಶೀಲರಾಗಿ ಯೋಚನೆಗಳನ್ನು ರೂಪಿಸುವ ಅಗತ್ಯತೆಯನ್ನು ವಿವರಿಸಿದರು. ಕೃತಕ ಬುದ್ಧಿಮತ್ತೆಯನ್ನು ನಮ್ಮ ನೈಜ ಸಾಮರ್ಥ್ಯವು ಗೆಲ್ಲಬಹುದು. ಜ್ಞಾನದ ಮೂಲಕ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಅಗತ್ಯತೆಯನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ನಿಮ್ಮ ವೃತ್ತಿಜೀವನವನ್ನು ಹಂತ ಹಂತವಾಗಿ ನಿರ್ಮಿಸಿಕೊಳ್ಳಿ. ನಾವು ದೊಡ್ಡ ವಿಷಯಗಳ ಬಗ್ಗೆ ಯೋಚಿಸುತ್ತೇವೆ, ಆದರೆ ಆ ದೊಡ್ಡ ಸಾಧನೆಗಳನ್ನು ಸಣ್ಣ ಸಣ್ಣ ಗುರಿಗಳನ್ನು ತಲುಪುವ ಮೂಲಕವೇ ಪಡೆಯಲು ಸಾಧ್ಯ. ಒಂದು ಕಾಲೇಜು ಉನ್ನತ ಮಟ್ಟಕ್ಕೇರುವುದು ಮೂಲಭೂತವಾಗಿ ಅಲ್ಲಿನ ಶಿಸ್ತು, ಕಠಿಣ ಪರಿಶ್ರಮ ಮತ್ತು ನಡವಳಿಕೆಯ ಮಾದರಿಯಿಂದ. ನೀವು ನಿಮ್ಮೊಳಗೆ ಒಬ್ಬ ಜವಾಬ್ದಾರಿಯುತ ನಾಗರಿಕರನ್ನು ಬೆಳೆಸಿಕೊಳ್ಳಬೇಕು. ಸಣ್ಣ ವಿಷಯಗಳನ್ನು ಶ್ರದ್ಧೆಯಿಂದ ಕಲಿಯಿರಿ, ಆಗ ನೀವು ನಿಜವಾಗಿಯೂ ಶ್ರೇಷ್ಠರಾಗುತ್ತೀರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವ್ಯವಹಾರ ನಿರ್ವಹಣಾ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಡಾ ರಾಧಾಕೃಷ್ಣಗೌಡ, ಕಾರ್ಯಕ್ರಮದ ಸಂಯೋಜಕ ಪ್ರಶಾಂತ್ ರೈ, ಸಂಚಾಲಕಿ ಪುಷ್ಪಾ ಎನ್., ಪಿ.ಆರ್.ಓ. ಡಾ. ಭಾರತಿ ಎಸ್. ರೈ, ವಿಭಾಗದ ಉಪನ್ಯಾಸಕರಾದ ಅಭಿಷೇಕ್ ಸುವರ್ಣ, ಶೃತಿ ಮತ್ತು ಸಿಂಚನ ಉಪಸ್ಥಿತರಿದ್ದರು.
ರಿಸೀತಾ, ಅಪೇಕ್ಷಾ ಮತ್ತು ನೀಧಿ ಪ್ರಾರ್ಥನೆ ನೆರವೇರಿಸಿದರು. ಪ್ರಥಮ ಬಿಬಿಎ ವಿದ್ಯಾರ್ಥಿ ಕೃಷ್ಣಾವಂಶಿ ಸ್ವಾಗತಿಸಿ, ಪ್ರಥಮ ಬಿಬಿಎ ವಿದ್ಯಾರ್ಥಿನಿ ಮೋನಿಷಾ ವಂದಿಸಿದರು. ಪ್ರಥಮ ಬಿಬಿಎ ವಿದ್ಯಾರ್ಥಿ ಅಬ್ದುಲ್ ಖಾದರ್ ಕಾರ್ಯಕ್ರಮ ನಿರ್ವಹಿಸಿದರು.



