ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಪ್ರಾರಂಭೋತ್ಸವ ಹಾಗೂ ಫತ್ಹೇ ಮುಬಾರಕ್ ಕಾರ್ಯಕ್ರಮ
Tuesday, March 31, 2026
ಮಂಗಳೂರು: ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಪ್ರಾರಂಭೋತ್ಸವ ಹಾಗೂ ಫತ್ಹೇ ಮುಬಾರಕ್ ಕಾರ್ಯಕ್ರಮ ಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಇಲ್ಲಿನ ಮದ್ರಸಾ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖತೀಬ್ ಅಬ್ದುಲ್ ನಾಸಿರ್ ಸಅದಿ ಅವರು, ಜನರು ಸಂಪಾದಿಸುವುದರಲ್ಲಿ ಅತ್ಯುತ್ತಮವಾದದ್ದು ವಿದ್ಯೆ. ವಿದ್ಯೆಯನ್ನು ಪಡೆದವನು ಎಲ್ಲವನ್ನೂ ಕರಗತ ಮಾಡಿಕೊಳ್ಳಲು ಸಾಧ್ಯ. ವಿದ್ಯೆ ಮಾನವನಿಗೆ ಸನ್ಮಾರ್ಗವನ್ನು ತೋರಿಸುವ ದೀಪವಾಗಿದೆ. ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿ, ನೈತಿಕ ಮೌಲ್ಯಗಳನ್ನು ಬೆಳೆಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಶಿಕ್ಷಣವೇ ಮುಖ್ಯ ಆಧಾರವಾಗಿದೆ ಎಂದು ತಿಳಿಸಿದರು.
ಸಭಾಧ್ಯಕ್ಷ ಅಬ್ದುಲ್ ರವೂಫ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಬದ್ಧರಾಗಿದ್ದೇವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಶಿಸ್ತನ್ನು, ಸಂಸ್ಕಾರವನ್ನು ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಉನ್ನತ ಶಿಕ್ಷಣವನ್ನು ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಮದ್ರಸ ಉಸ್ತುವಾರಿ ನಝೀರ್ ಬಜಾಲ್, ಅಶ್ರಫ್ ತೋಟ, ಸಂಚಾಲಕ ಬಿ. ಫಕ್ರುದ್ದೀನ್, ಪ್ರ.ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ನಝೀರ್ ಪಾಂಡೆಲ್, ಮೊಯಿದಿನ್ ಕುಂಜಿ ಇಕ್ಬಾಲ್ ಅಹ್ಸನಿ, ಎಂ. ಎಚ್. ಮುಹಮ್ಮದ್, ಹನೀಫ್ ಕೆಳಗಿನಮನೆ, ಅಧ್ಯಾಪಕರಾದ ಅಬ್ದುಲ್ ರಹ್ಮಾನ್ ಮದನಿ, ಸಮೀರ್ ಸಅದಿ, ನಿಸಾರ್ ಹಾಶಿಮಿ ಉಪಸ್ಥಿತರಿದ್ದರು.
ಮದ್ರಸಾ ಸದರ್ ಮುಅಲ್ಲಿಮ್ ಅಬ್ದುಲ್ ಹಕೀಂ ಮದನಿ ಸ್ವಾಗತಿಸಿ, ಅಬೂಬಕ್ಕರ್ ಸಖಾಫಿ ವಂದಿಸಿದರು.


