ಮೂಡುಬಿದಿರೆಯ ಗೃಹರಕ್ಷಕ ಪಾಂಡುರಾಜ್ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಗೌರವ
Sunday, March 1, 2026
ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ತಾಲೂಕು ಗೃಹರಕ್ಷಕ ದಳ ಘಟಕದ ಹಿರಿಯ ಗೃಹ ರಕ್ಷಕ , ಘಟಕಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವ ಪಾಂಡುರಾಜ ಅವರ ಸೇವೆಯನ್ನು ಗುರುತಿಸಿ 2024-25 ನೇ ಸಾಲಿನ ಮುಖ್ಯಮಂತ್ರಿಯವರ ಚಿನ್ನದ ಪದಕ ಗೌರವ ನೀಡಲಾಗಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ ದಳ ಪೌರ ರಕ್ಷಣೆ ಮತ್ತು ಎಸ್.ಡಿ.ಆರ್.ಎಫ್ ಅವರಿಗೆ ನೀಡಲಾಗುವ ಗೌರವಕ್ಕೆ ದ.ಕ ಜಿಲ್ಲೆಯಿಂದ ಏಕೈಕ ಪ್ರತಿನಿಧಿಯಾಗಿ ಪಾಂಡುರಾಜ ಈ ಗೌರವ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಆರ್.ವಿ. ಮುಂಡ್ಕೂರ್ ಅಗ್ನಿಶಾಮಕ ತರಬೇತಿ ಅಕಾಡೆಮಿ ಅವರಣದಲ್ಲಿ ಕಳೆದ ಮಂಗಳವಾರ ಜರಗಿದ ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್ ಅವರು ಸೇವಾಸಾಧಕರಿಗೆ ಪದಕಪ್ರದಾನ ಮಾಡಿ ಗೌರವಿಸಿದರು.
ಗೃಹರಕ್ಷಕರಾಗಿ 1986 ರಿಂದ ಹಾಗೂ ಘಟಕಾಧಿಕಾರಿಯಾಗಿ 2015ರಿಂದ 2024 ರ ಅವಧಿಗೆ ಪಾಂಡುರಾಜ್ ಒಟ್ಟು 38 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸ್ಥಳೀಯ ಚುನಾವಣೆ ಸಹಿತ ಕೇರಳ, ಮಧ್ಯಪ್ರದೇಶ ಹಾಗೂ ತಮಿಳುನಾಡು ವಿಧಾನ ಸಭಾ ಹಾಗೂ ಲೋಕ ಸಭಾ ಚುನಾವಣಾ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಣೆ, ಮೈಸೂರು, ಕೊಡಗು ದಸರಾ, ಧರ್ಮಸ್ಥಳ, ವೇಣೂರು, ಮಹಾಮಸ್ತಕಾಭಿಷೇಕ ಸಹಿತ ಮಹತ್ವದ ಕಾರ್ಯಕ್ರಮಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಬಂದೋಬಸ್ತು ಕರ್ತವ್ಯ, ಟ್ರಾಫಿಕ್ ವಾರ್ಡನ್, ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಣೆ, ಸಾಮಾಜಿಕ ಕಳಕಳಿ , ಕೋವಿಡ್ ಸಂಕಷ್ಟದ ಅವಧಿಯಲ್ಲಿ ಅವರು ಗಮನಾರ್ಹ ಸೇವೆ ಸಲ್ಲಿಸಿ 2024ರಲ್ಲಿ ನಿವೃತ್ತರಾಗಿದ್ದರು.