‘ಪಠ್ಯೇತರ ಚಟುವಟಿಕೆಗಳು ಉತ್ತಮ ಅವಕಾಶಗಳನ್ನು ಸೃಷ್ಟಿಸಬಲ್ಲವು’: ಸತೀಶ್ ಬಂದಲೆ

‘ಪಠ್ಯೇತರ ಚಟುವಟಿಕೆಗಳು ಉತ್ತಮ ಅವಕಾಶಗಳನ್ನು ಸೃಷ್ಟಿಸಬಲ್ಲವು’: ಸತೀಶ್ ಬಂದಲೆ


ಕೊಣಾಜೆ: ವಿದ್ಯಾರ್ಥಿ ಜೀವನ ಮಹತ್ವದ್ದಾಗಿದೆ. ನಾವು ಉತ್ತಮ ಶಿಕ್ಷಣದೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉದ್ಯೋಗವನ್ನು ಪಡೆಯುವ ಮೂಲಕ ಪೋಷಕರಿಗೆ, ಕಲಿತ ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವ ಕೆಲಸ ಮಾಡಬೇಕು. ಶಿಕ್ಷಣದೊಂದಿಗೆ ನಾವು ತೊಡಗಿಸಿಕೊಳ್ಳುವ ಪಠ್ಯೇತರ ಚಟುವಟಿಕೆಗಳು ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಸೃಷ್ಟಿಸಬಲ್ಲವು ಎಂದು ನಟ ಸತೀಶ್ ಬಂದಲೆ ಹೇಳಿದ್ದಾರೆ.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಸ್ಪರ್ಧೆ ’ಸಂಭ್ರಮ-2026’ನ್ನು ಬುಧವಾರ ಮಂಗಳ ಸಭಾಂಗಣದಲ್ಲಿ ಉದ್ಘಾಟಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತಾವು ವಿದ್ಯಾರ್ಥಿಗಳಾಗಿರುವುದು ಹೆಮ್ಮೆಯ ಸಂಗತಿ. ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಬೆಳವಣಿಗೆಗೆ ಪೂರಕವಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ,  ತುಳು ಸಿನೆಮಾ, ನಾಟಕಗಳು ಕೇವಲ ಮನೋರಂಜನೆಗೆ ಮಾತ್ರವಲ್ಲ, ಅವುಗಳಲ್ಲಿ ಸಮಾಜಕ್ಕೆ ಸಂದೇಶ ಇರುವುದನ್ನು ಕೂಡಾ ಗಮನಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ನಡೆಯುವ ಇಂತಹ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಾವು ತೊಡಗಿಸಿಕೊಂಡು ಮುನ್ನಡೆಯಬೇಕು ಎಂದರು. 

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಯಶ್ವಿನ್ ಕೆ.ಪಿ., ಅಪೇಕ್ಷಾ ಎಚ್. ಆಳ್ವ, ನಿಹಾರ್ ಗಾಂವ್ಕರ್, ಮಿಲನ್ ಮುತ್ತಣ್ಣ, ಶ್ರೀಶ ಕೆ., ಕೇಸರಿ ಮತ್ತಿತರರು ಉಪಸ್ಥಿತರಿದ್ದರು. 

ಇದೇ ವೇಳೆ ಸತೀಶ್ ಬಂದಲೆಯವರನ್ನು ಗೌರವಿಸಲಾಯಿತು. 

ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೆಶಕ ಡಾ.ಮೋಹನ್ ಸಿಂಘೆ ಸ್ವಾಗತಿಸಿದರು. ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಕೇಸರಿ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article