ಬೆಸೆಂಟ್ ಮಹಿಳಾ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ
Saturday, May 16, 2026
ಮಂಗಳೂರು: ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಕಾಲೇಜು ಸಭಾಂಗಣದಲ್ಲಿ ಇತ್ತೀಚಿಗೆ ನೆರವೇರಿತು.
ಮುಖ್ಯ ಅತಿಥಿಯಾಗಿ ಎಂಆರ್ಪಿಎಲ್ನ ಮಾನವ ಸಂಪನ್ಮೂಲ ವಿಭಾಗದ ನಿವೃತ್ತ ಮಹಾಪ್ರಬಂಧಕಿ ವೀಣಾ ಟಿ. ಶೆಟ್ಟಿ ಅವರು ಭಾಗವಹಿಸಿ ಹೆಣ್ಣು ಮಕ್ಕಳನ್ನು ಸತ್ಪ್ರಜೆಯನ್ನಾಗಿಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು ವಿದ್ಯಾರ್ಥಿಗಳು ಜೀವನದ ಸಿಹಿ ಸವಿಯನ್ನು ಸಮಾನವಾಗಿ ಹಂಚಿಕೊಂಡು ಮೌಲ್ಯಗಳನ್ನು ಅರಿಯುವ ಜೊತೆಗೆ ವಿಕಸಿತ ಮನೋಭಾವವನ್ನು ಬೆಳೆಸಬೇಕು ಎಂದು ಹೇಳಿದರು.
ಕಾಲೇಜಿನ ಸಂಚಾಲಕಿ ಮತ್ತು ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಮಂಜುಳಾ ಕೆ.ಟಿ. ಗೌರವ ಅತಿಥಿಯ ನೆಲೆಯಲ್ಲಿ ಭಾಗವಹಿಸಿ ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಕೌಶಲವನ್ನು ಬೆಳೆಸುವ ಜೊತೆಗೆ ಬದುಕಿನ ಪ್ರತಿ ಹಂತದಲ್ಲಿ ಅವರ ಶೈಕ್ಷಣಿಕ ಪ್ರಗತಿಯನ್ನು ಗಮನಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಎಸ್ಸಿ ಗೃಹವಿಜ್ಞಾನದಲ್ಲಿ ಪ್ರಥಮ ರ್ಯಾಂಕ್ ಪಡೆದ ಆಶಿಯಾ ಆಫ್ರಾರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶಮೀನಾ ಮತ್ತಿತರು ಉಪಸ್ಥಿತರಿದ್ದರು.
ಸಂಘದ ಸಂಯೋಜಕಿ ಪ್ರೊ. ರಂಜಿನಿ ಶೆಟ್ಟಿ ಅವರು ಆಯವ್ಯಯ ಪತ್ರವನ್ನು ಮಂಡಿಸಿ ಅನುಮೋದನೆ ಪಡೆದರು. ಹಿಂದಿ ವಿಭಾಗ ಸಹಾಯಕ ಪ್ರಾಧ್ಯಾಪಕಿ ಕೀರ್ತನಾ ಶೆಟ್ಟಿ ಸ್ವಾಗತಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರೀತಾ ಭಂಡಾರಿ ವಂದಿಸಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ರವಿಪ್ರಭಾ ನಿರೂಪಿಸಿದರು.
