ಯೋಗ ಮಹೋತ್ಸವ-2026
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾ ಫಾರ್ಮಸಿಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಯೋಗ ಮಹೋತ್ಸವದಂತಹ ಕಾರ್ಯಕ್ರಮಗಳು ಯೋಗದ ಮಹತ್ವ ಮತ್ತು ಅದರ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಪರಿಣಾಮಕಾರಿ ವೇದಿಕೆ. ಇಂದಿನ ವೇಗದ ಬದುಕಿನಲ್ಲಿ ಯೋಗದ ಅಭ್ಯಾಸ ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ. ಯುವಜನತೆ ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಂಡರೆ ಆರೋಗ್ಯಕರ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದ ಅಂಗವಾಗಿ ಸಂಯೋಜಿತ ಯೋಗ ಅಭ್ಯಾಸ ಕ್ರಮದನ್ವಯ (ಕಾಮನ್ ಯೋಗ ಪ್ರೋಟೋಕಾಲ್) ಯೋಗ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಾರ್ವಜನಿಕರು ಸೇರಿದಂತೆ ೫೦೦ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಯೋಗ ಮಹೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಭಗವದ್ಗೀತೆ ಶ್ಲೋಕ ಪಠಣದಲ್ಲಿ ಶ್ರೀನಿಧಿ ಭಟ್ ಪ್ರಥಮ ಹಾಗೂ ದೀಪಿಕಾ ಹೆಗ್ಡೆ ದ್ವಿತೀಯ ಬಹುಮಾನ ಪಡೆದರು. ಶೀರ್ಷಾಸನ ಬ್ಯಾಲೆನ್ಸ್ ಚಾಲೆಂಜ್ನಲ್ಲಿ ಪ್ರಜ್ವಲ್ ಮತ್ತು ಮುಕ್ತಾ ಪ್ರಥಮ, ಸಾಗರ್ ಹಾಗೂ ಭೂಮಿಕಾ ಟಿ. ದ್ವಿತೀಯ ಸ್ಥಾನ ಗಳಿಸಿದರು. ಫ್ಯೂಷನ್ ಯೋಗ ಡ್ಯಾನ್ಸ್ ಸ್ಪರ್ಧೆಯಲ್ಲಿ ಮುಕ್ತಾ ಮತ್ತು ತಂಡ ಪ್ರಥಮ, ಪ್ರಣವ್ ಮತ್ತು ತಂಡ ದ್ವಿತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚರ್ಯ ಡಾ. ವನಿತಾ ಶೆಟ್ಟಿ, ಉಪಪ್ರಾಂಶುಪಾಲೆ ಡಾ. ವಿದ್ಯಾರಾಣಿ, ಪ್ರಾಧ್ಯಪಕಿ ಡಾ. ಅರ್ಚನಾ ಇದ್ದರು. ಅನಂತ ಕೃಷ್ಣ ಕರ್ಯಕ್ರಮ ನಿರೂಪಿಸಿದರು.
