ನೀರಿನ ಸಮಸ್ಯೆ: ಗ್ರಾ.ಪಂ. ಮುತ್ತಿಗೆ

ನೀರಿನ ಸಮಸ್ಯೆ: ಗ್ರಾ.ಪಂ. ಮುತ್ತಿಗೆ


ಉಳ್ಳಾಲ: ಅಂಬ್ಲಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಿಲಕ್ ನಗರ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಶೀಘ್ರ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ತಿಲಕ್ ನಗರ ನಿವಾಸಿಗಳು ಬುಧವಾರ ಮೆರವಣಿಗೆ ನಡೆಸಿ ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿದ್ದಾರೆ.

ತಿಲಕ್ ನಗರ ಪ್ರದೇಶದ ಜನರು ಕಳೆದ ಮೂರು ತಿಂಗಳಿನಿಂದ ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ನಿವಾಸಿಗಳು ಹಲವಾರು ಬಾರಿ ಗ್ರಾಮ ಪಂಚಾಯತ್ ಗೆ ಮನವಿ ಮಾಡಿದರೂ ಅಧಿಕಾರಿಗಳು ಈವರೆಗೂ ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಇದರಿಂದ ಆಕ್ರೋಶ ಗೊಂಡ ಗ್ರಾಮಸ್ಥರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 

ಪಂಚಾಯತ್ 100 ರೂ ಇದ್ದ ಕುಡಿಯುವ ನೀರಿನ ದರವನ್ನು 150 ಕ್ಕೆ ಏರಿಕೆ ಮಾಡಿದೆ. ಆದರೂ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊಸ ಕೊಳವೆ ಬಾವಿ ಆಗುವವರೆಗೆ ಟ್ಯಾಂಕರ್ ನಲ್ಲಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. 

ಗ್ರಾಮಸ್ಥರಾದ ಅನಿಲ್ ತಿಲಕ್ ನಗರ, ಅಝರ್, ಖಲೀಲ್, ಅಶ್ಫಾಕ್, ಸತೀಶ್, ಬಾಬಣ್ಣ, ಧನಲಕ್ಷಿ, ಐಸಮ್ಮ ರುಕಿಯ, ಗೀತಾ, ಸುರೇಖಾ, ಕಾರ್ಮಿಕ ಮುಖಂಡರಾದ ಇಬ್ರಾಹೀಂ ಮದಕ, ರಫೀಕ್ ಹರೇಕಳ, ರಿಝ್ವಾನ್ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article