ವಾಮದಪದವು ಅಶ್ವಥ ಮರ ಬಿದ್ದು ಸ್ಕೂಟರ್ ಸವಾರನಿಗೆ ಗಾಯ,ಹಲವು ವಾಹನ ಜಖಂ
Saturday, June 6, 2026
ಬಂಟ್ವಾಳ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುವ ಮಳೆಗೆ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿಯಾಗುತ್ತಿದ್ದು, ಶುಕ್ರವಾರ ರಾತ್ರಿ ವೇಳೆ ಗಾಳಿ,ಮಳೆಗೆ ವಾಮದಪದವು ಜಂಕ್ಷನ್ ಬಳಿ ಮರವೊಂದು ಸಂಚರಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದು ಸವಾರ ಗಾಯಗೊಂಡ ಘಟನೆ ನಡೆದಿದೆ.
ವಾಮದಪದವು ನಿವಾಸಿ ಮಾದವ ನಾಯ್ಕ ಎಂಬವರು ಗಾಯಗೊಂಡಿದ್ದು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಸ್ಥಳೀಯ ಸಮನಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ನೂರಾರು ವರ್ಷಗಳ ಕಾಲ ಹಳೆಯದಾಗಿರುವ ಬೃಹತ್ ಗಾತ್ರದ ಅಶ್ವಥ ಮರ ಬುಡದಲ್ಲಿ ನಿರಂತರ ಮಳೆಗೆ ಮಣ್ಣು ಸಡಿಲಗೊಂಡು ರಸ್ತೆಗೆ ಬಿದ್ದಿದ್ದು, ರಸ್ತೆ ಬದಿ ನಿಲ್ಲಿಸಲಾಗಿದ್ದ ನಾಲ್ಜರಿಂದ ಐದು ದ್ವಿಚಕ್ರ ವಾಹನಗಳು ಜಖಂ ಗೊಂಡಿದೆ ಎಂದು ತಿಳಿದು ಬಂದಿದೆ.
ಅದೇ ರೀತಿ ನಾಲ್ಕೈದು ವಿದ್ಯುತ್ ಕಂಬಗಳು ಕೂಡ ಧರಾಶಾಹಿಯಾಗಿದ್ದು, ತಂತಿಗಳು ತುಂಡರಿಸಲ್ಪಟ್ಟಿದ್ದರಿಂದ ವಿದ್ಯುತ್ ಕಡಿತಗೊಂಡಿದೆ.ರಸ್ತೆಗೆ ಬಿದ್ದಿರುವ ಮರವನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ.
ಗಾಯಾಳು ಮಾದವ ನಾಯ್ಕ ಅವರನ್ನು ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್ ಅವರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯಿಂದ ಸಾವಿರಾರು ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

