ಅಕ್ರಮ ಪ್ರವೇಶಗೈದು ಅಡಿಕೆ ಸಸಿ ಕೊಚ್ಚಿ ಹಾಕಿದ ಆರೋಪಿಗಳು: ಅಪಾರ ನಷ್ಟ, ಕೇಸು ದಾಖಲು
ಈ ಬಗ್ಗೆ ಶಾಂತಿ ಕುಮಾರ್ (44) ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇವರ ಸ್ವಾಧೀನದಲ್ಲಿರುವ ಸಂಗಬೆಟ್ಟು ಗ್ರಾಮದ ಬಿತ್ತಾಡಿಪಾದೆ ಎಂಬಲ್ಲಿರುವ ಸುಮಾರು 0.25 ಎಕ್ರೆ ಕೃಷಿ ಭೂಮಿ ವಿಚಾರವಾಗಿ ಇವರಿಗೂ ಪಕ್ಕದ ಮನೆಯ ಸೇಸಪ್ಪ ಶೇರಿಗಾರ್ ಅವರಿಗೂ ತಕರಾರಿದೆ ಎಂದು ದೂರಿನಲ್ಲಿತಿಳಿಸಲಾಗಿದೆ.
ಜುಲೈ 16 ರಂದು ಬೆಳಗ್ಗೆ ತಾನು ಕೆಲಸಕ್ಕೆ ಹೋಗಿದ್ದು, ಅವರ ಮಕ್ಕಳು ಶಾಲೆಗೆ ಹೋಗಿದ್ದರು. ಮಧ್ಯಾಹ್ನ 2.30 ಗಂಟೆಗೆ ವಾಪಾಸು ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಪಕ್ಕದ ಮನೆಯ ಸೇಸಪ್ಪ ಶೇರಿಗಾರ್, ಅವರ ಪತ್ನಿ ಸವಿತಾ, ಅವರ ಮಕ್ಕಳಾದ ಸವೀಕ್ಷಾ, ಸಮರ್ಥ್, ಸಾಕ್ಷಾತ್, ಅತ್ತೆ ಶಾಂಭವಿ ಮತ್ತು ಕೆಲಸದವರೊಂದಿಗೆ ಸೇರಿಕೊಂಡು ಬೆಳೆಸಲಾದ 7 ವರ್ಷ ಪ್ರಾಯದ 150 ಅಡಿಕೆ ಸಸಿಗಳನ್ನು ಕಡಿದು ಹಾಕಿ, ಜೆಸಿಬಿಯಿಂದ ಸಮತಟ್ಟು ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಕ್ಕೆ ಸೇಸಪ್ಪ ಶೇರಿಗಾರ್ ಮತ್ತವರ ಮನೆಯವರು ಈ ಜಾಗ ನಮಗೆ ಸೇರಿದ್ದು, ಅದಕ್ಕೆ ನಾವು ಇದರಲ್ಲಿದ್ದ ಕೃಷಿಯನ್ನು ನಾಶ ಮಾಡಿರುತ್ತೇವೆ, ನೀವುಗಳು ಧೈರ್ಯವಿದ್ದರೆ ತಡೆಯಿರಿ, ಮುಂದೆ ಬಂದರೆ ನಿಮ್ಮನ್ನೂ ಅಡಿಕೆ ಸಸಿ ಕಡಿದು ಹಾಕಿದಂತೆ ಕಡಿದು ಹಾಕುತ್ತೇವೆ ಎಂದು ಬೆದರಿಸಿ, ಅವಾಚ್ಯ ಶಬ್ದಗಳಿಂದ ಬೈದು ಜಾಗಕ್ಕೆ ಹೋಗದಂತೆ ತಡೆದಿರುತ್ತಾರೆ. ಬೆಳೆದ ಕೃಷಿ ನಾಶ ಮಾಡಿರುವುದರಿಂದ ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ನೀಡಿರುವ ದೂರಿನಲ್ಲಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.