ಲೋಕ ಅದಾಲತ್ನಲ್ಲಿ ಅಂತ್ಯಗೊಂಡ ಗಂಡ-ಹೆಂಡತಿ ವಿರಸ: ಒಂದಾದ ದಂಪತಿ
ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ. ಅವರ ನೇತೃತ್ವದಲ್ಲಿ ನಡೆದ ಈ ದಂಪತಿಯ ಸಂಧಾನ ಪ್ರಕ್ರಿಯೆಗೆ ಅವರ ಪರವಾದ ವಕೀಲರುಗಳಾದ ಪಿ. ಬಾನುಶಂಕರ್ ಹಾಗೂ ಪಿ. ಜಯರಾಮ ರೈ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿ ದಂಪತಿ ಮತ್ತೆ ಒಂದಾಗುವಲ್ಲಿ ಪ್ರಮುಖ ಪಾತ್ರವಹಿಸಿದರು.
ಸುದೀರ್ಘ ಸಮಯದಿಂದ ನ್ಯಾಯಾಲಯದಲ್ಲಿ ಬಾಕಿಯಾಗಿದ್ದ ದಂಪತಿಯ ಕೌಟುಂಬಿಕ ವಿವಾದ ಮತ್ತು ಉಭಯ ಪಕ್ಷದ ಅಭಿಪ್ರಾಯಗಳನ್ನು ಶಾಂತಿಯುತವಾಗಿ ಆಲಿಸಿದ ಬಳಿಕ ನ್ಯಾಯಾಧೀಶರು ಹಾಗೂ ವಕೀಲರುಗಳು ದಾಂಪತ್ಯ ಜೀವನದ ಮಹತ್ವ, ಕುಟುಂಬದ ಮೌಲ್ಯಗಳು ಹಾಗೂ ಪರಸ್ಪರ ಹೊಂದಾಣಿಕೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ಇದರ ಫಲಪ್ರದವಾಗಿ ವಿಚ್ಛೇದನದ ಹಾದಿಯಲ್ಲಿದ್ದ ದಂಪತಿ ತಮ್ಮೊಳಗಿದ್ದ ಭಿನ್ನಾಭಿಪ್ರಾಯ,ವಿರಸವನ್ನು ಮರೆತು ಮತ್ತೆ ಒಂದಾಗಿ ದಾಂಪತ್ಯ ಜೀವನ ಮುಂದುವರಿಸಲು ಸಮ್ಮತಿಸಿದರು.
ಹಾರ ಬದಲಾಯಿಸಿದರು:
ಬಳಿಕ ನ್ಯಾಯಾಧೀಶರು, ವಕೀಲರುಗಳ ಸಮ್ಮುಖದಲ್ಲಿ ದಂಪತಿ ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡರಲ್ಲದೆ ಹೊಸ ಜೀವನ ಆರಂಭಿಸುವ ಸಂಕಲ್ಪ ವ್ಯಕ್ತಪಡಿಸಿದರು. ದಂಪತಿಯ ಈ ಭಾವನಾತ್ಮಕವಾದ ಕ್ಷಣ ನ್ಯಾಯಾಲಯದ ಅವರಣದಲ್ಲಿದ್ದವರನ್ನು ಮೂಕಸ್ಮಕರನ್ನಾಗಿಸಿತು. ನ್ಯಾಯಾಂಗದ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯಾದ ಲೋಕ ಅದಾಲತ್ ಕೇವಲ ಪ್ರಕರಣಗಳ ಇತ್ಯರ್ಥಕ್ಕೆ ಮಾತ್ರ ಸೀಮಿತವಲ್ಲದೆ, ಕುಟುಂಬಗಳನ್ನು ಮತ್ತೆ ಒಂದುಗೂಡಿಸುವ ಮಾನವೀಯ ವೇದಿಕೆಯೂ ಆಗಿದೆ ಎಂಬುದನ್ನು ಸಾಬೀತುಪಡಿಸಿತು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ., ದಂಪತಿ ಪರವಾದ ವಕೀಲರಾದ ಭಸನುಶಂಕರ್, ಜಯರಾಮ ರೈ, ವಕೀಲರ ಸಂಘದ ಅಧ್ಯಕ್ಷ ರಿಚಾಡ್೯ ಕೋಸ್ತ ಎಂ., ಅವರ ಸಹಿತ ನ್ಯಾಯಾಲಯದ ಸಭಾಂಗಣದಲ್ಲಿದ್ದ ಇತರೆ ವಕೀಲರು ಮತ್ತೊಮ್ಮೆ ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗೆ ಶುಭಹಾರೈಸಿದರು.
ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಬಂಟ್ವಾಳ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 42,598 ಪ್ರಕರಣ ಇತ್ಯರ್ಥ ಗೊಂಡಿದ್ದು, ವಿವಿಧ ಪ್ರಕರಣಗಳಲ್ಲಿ ಒಟ್ಟು 44,875,994 ರೂ. ನಗದು ವಸೂಲಾತಿಯಾಗಿದೆ ಎಂದು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ರಕಟಣೆ ತಿಳಿಸಿದೆ.
19 ಸಿವಿಲ್ ಪ್ರಕರಣ ಇತ್ಯರ್ಥವಾಗಿದ್ದು, 49,48,941 ರೂ. ವಸೂಲಾದರೆ, 257 ಕ್ರಿಮಿನಲ್ ಪ್ರಕರಣ ಇತ್ಯರ್ಥ ವಾಗಿದ್ದು, 1,300,124 ರೂ. ವಸೂಲಾತಿಯಾಗಿದೆ. ಅದೇ ರೀತಿ 42,322 ಪಿಎಲ್ಸಿ ಪ್ರಕರಣಗಳು (ದಾವಾ ಪೂರ್ವ ಪ್ರಕರಣ) ಇತ್ಯರ್ಥ ಗೊಂಡಿದ್ದು, 38,626,29 ರೂ. ಮೊತ್ತ ವಸೂಲಿಯಾಗಿದೆ. ವಿವಿಧ ಶುಲ್ಕ ಪ್ರಕರಣಗಳು, ಎಂಎಂಆರ್ಡಿ, ಚೆಕ್ಬೌನ್ಸ್ ಮೋಟಾರು ವಾಹನ ಪ್ರಕರಣಗಳು ಇತರ ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳನ್ನು ಪರಿಹರಿಸಿಕೊಳ್ಳಲಾಯಿತು.
ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು, ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ., ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕು.ಸೌಂದರ್ಯ ಎಂ. ಸಮಕ್ಷಮದಲ್ಲಿ ಪ್ರಕರಣಗಳು ಇತ್ಯರ್ಥಗೊಂಡವು.
ಸಹಾಯಕ ಸರಕಾರಿ ಅಭಿಯೋಜಕರಾದ ಸರಸ್ವತಿ, ಹರಿಣಿ ಕುಮಾರಿ ಡಿ., ಅಪರ ಸರಕಾರಿ ವಕೀಲರಾದ ಬಿ. ವೆಂಕಟರಮಣ ಶೆಣೈ, ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತ ಎಂ. ಹಾಗೂ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಅದಾಲತ್ಗೆ ವಕೀಲರ ಸಂಘ ಬಂಟ್ವಾಳ, ಕಂದಾಯ ಇಲಾಖೆ, ಪುರಸಭೆ, ಪೊಲೀಸ್ ಇಲಾಖೆ, ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳು ಸಹಕರಿಸಿದ್ದವು.
