ಕೊಲ್ಲೂರು ವಸತಿಗೃಹದಲ್ಲಿ ಮಹಿಳೆ ಆತ್ಮಹತ್ಯೆ
ಕುಂದಾಪುರ: ಕೊಲ್ಲೂರಿನ ಖಾಸಗಿ ಲಾಡ್ಜ್ನಲ್ಲಿ ತಂಗಿದ್ದ ಕೇರಳ ಮೂಲದ ಮಹಿಳೆಯೊಬ್ಬರ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಧನ್ಯಶ್ರೀ ಎನ್. (35) ಎಂದು ಗುರುತಿಸಲಾಗಿದೆ.
ಅವರು ಜುಲೈ 19ರಂದು ಸಂಜೆ ಕೊಲ್ಲೂರಿನ ಅಮ್ಮ ಲಾಡ್ಜ್ನಲ್ಲಿ ವಾಸ್ತವ್ಯಕ್ಕೆ ಕೊಠಡಿ ಪಡೆದಿದ್ದರು. ಜುಲೈ 21ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅವರು ಕೊಠಡಿಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ, ಮಧ್ಯಾಹ್ನ ಸುಮಾರು 2.30ಕ್ಕೆ ಲಾಡ್ಜ್ ಸಿಬ್ಬಂದಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ.
ಬಳಿಕ ರೂಮ್ ಬಾಯ್ ಜೊತೆಗೆ ಕಿಟಕಿಯಿಂದ ಒಳಗೆ ನೋಡಿದಾಗ, ಕೊಠಡಿಯೊಳಗೆ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಜುಲೈ 20ರ ರಾತ್ರಿ 8.30ರಿಂದ ಜುಲೈ 21ರ ಮಧ್ಯಾಹ್ನ 2.30ರ ನಡುವಿನ ಅವಧಿಯಲ್ಲಿ ಅವರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ವಯಕ್ತಿಕ ಸಮಸ್ಯೆಯೇ ಸಾವಿಗೆ ಕಾರಣವೆಂದು ಊಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.