ಐಆರ್ಸಿಟಿಸಿ ವತಿಯಿಂದ ಓಣಂ ರಜಾ ವಿಶೇಷ ಪ್ರವಾಸ
ಮಂಗಳೂರು: ಭಾರತೀಯ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ ಲಿ. (ಐಆರ್ಸಿಟಿಸಿ) ವತಿಯಿಂದ ಓಣಂ ರಜಾ ವಿಶೇಷ – ಅಹಮದಾಬಾದ್ ಸಹಿತ ಗೋಲ್ಡನ್ ಟ್ರಯಾಂಗಲ್ ಭಾರತ ಗೌರವ ವಿಶೇಷ ಪ್ರವಾಸಿ ರೈಲಿನ ಚಾಲನೆ ದೊರೆಯಲಿದೆ. ಈ ವಿಶೇಷ ರೈಲು ಆ.22ರಂದು ಮಂಗಳೂರಿನ ಮೂಲಕ ಪ್ರಯಾಣ ಆರಂಭಿಸಿ ಸೆ.1ರಂದು ಮರಳಲಿದೆ ಎಂದು ಐಆರ್ಸಿಟಿಸಿಯ ಗ್ರೂಪ್ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಪಿ. ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಮದಾಬಾದ್ – ಸಾಬರಮತಿ ಆಶ್ರಮ, ರಾಣಿ ಕಿ ವಾವ್, ಅಡಲಜ್ ಮೆಟ್ಟಿಲು ಬಾವಿ, ಏಕತಾ ನಗರ – ಸ್ಟ್ಯಾಚ್ಯೂ ಆಫ್ ಯುನಿಟಿ, ದೆಹಲಿ ಕೆಂಪುಕೋಟೆ, ರಾಜ್ಘಾಟ್, ಇಂಡಿಯಾ ಗೇಟ್, ಲೋಟಸ್ ಟೆಂಪಲ್, ಕುತುಬ್ ಮಿನಾರ್, ಆಗ್ರಾ – ತಾಜ್ ಮಹಲ್, ಜೈಪುರದ– ಆಮೇರ್ ಕೋಟೆ, ಹವಾ ಮಹಲ್, ಸಿಟಿ ಪ್ಯಾಲೆಸ್, ಜಂತರ್ ಮಂತರ್ ಮೊದಲಾದ ತಾಣಗಳಿಗೆ ಪ್ರವಾಸದಲ್ಲಿ ಭೇಟಿ ಇದೆ ಎಂದರು.
ವಿಶೇಷ ವಿಮಾನ ಪ್ರವಾಸ ಪ್ಯಾಕೇಜ್:
ಐಆರ್ಸಿಟಿಸಿ ಬೋಧಗಯಾ, ಕಾಶಿ, ಪ್ರಯಾಗರಾಜ್ ಹಾಗೂ ಅಯೋಧ್ಯೆ ಪ್ರವಾಸವನ್ನು ಒಳಗೊಂಡ ದೇಶೀಯ ವಿಮಾನ ಪ್ಯಾಕೇಜ್ನ್ನು ಸಹ ಆಯೋಜಿಸಿದೆ. ಈ ಪ್ರವಾಸವು ಆ.27ರಿಂದ ಸೆ.1ರ ವರೆಗೆ ಆಯೋಜಿಸಲಾಗಿದೆ. ಇದಲ್ಲದೆ ಶ್ರೀನಗರ, ಗುಲ್ಮಾರ್ಗ್, ಸೋನಮಾರ್ಗ್ ಹಾಗೂ ಪಹಲ್ಗಾಮ್ ಒಳಗೊಂಡ ಕಾಶ್ಮೀರ ವಿಮಾನ ಪ್ರವಾಸ ಪ್ಯಾಕೇಜ್ ಕೂಡ ಲಭ್ಯವಿದೆ. ಸೆ.12ರಿಂದ 17ರ ವರೆಗೆ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ನಾಯರ್ ತಿಳಿಸಿದರು.
ಹೆಚ್ಚಿನ ಮಾಹಿತಿಗೆ ವೆಬ್ಸೈಟ್: www.irctctourism.com ಅಥವಾ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿರುವ ಐಆರ್ಸಿಟಿಸಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದವರು ತಿಳಿಸಿದರು.