ವಿವಾದಕ್ಕೀಡಾದ ಆರೋಗ್ಯ ಸಚಿವರ ‘ಗುಂಡು’ ಹೇಳಿಕೆ
ಮಂಗಳೂರು: ‘ಅಪರಾದ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹೊಡೆಯಿರಿ’ ಎಂದು ಆರೋಗ್ಯ ಸಚಿವ ಯು. ಟಿ. ಖಾದರ್ ಅವರು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರಿಗೆ ನೀಡಿರುವ ಸೂಚನೆಗೆ ಪರ-ವಿರೋಧ ವ್ಯಕ್ತವಾಗಿದೆ.
ಭಾನುವಾರ ಪಡೀಲ್ನಲ್ಲಿರುವ ದ. ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಕೃತಿ ವಿಕೋಪ ನಿರ್ವಹಣೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಮಂಗಳೂರಿನ ಕಾನೂನು ಸುವ್ಯವಸ್ಥೆಯ ಕುರಿತು ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದು, ಹಿಂದಿನ ಆಯುಕ್ತ ಸಂದೀಪ್ ಪಾಟೀಲ್ ಗುಂಡು ಹೊಡೆದಿದ್ದರು. ಇದರಿಂದಾಗಿ ಕ್ರಿಮಿನಲ್ಸ್, ರೌಡಿ ಶೀಟರ್ಗಳು ಅಪರಾಧ ಕೃತ್ಯ ಎಸಗಲು ಹೆದರುತ್ತಿದ್ದರು. ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಕಾಲಿಗೆ ಗುಂಡು ಹೊಡೆಯಲಾಗಿತ್ತು. ಇಲ್ಲಿ ಕಾನೂನಿನ ಅಡ್ಡಿ ಇದೆ. ಆದರೆ ಹೆದರಿಕೆಯಿಂದ ಅಪರಾಧ ಚಟುವಟಿಕೆ ಕಡಿಮೆಯಾಗಿ ನಿಯಂತ್ರಣಕ್ಕೆ ಬರುತ್ತದೆ ಎಂದಿದ್ದರು.
ಮಂಗಳೂರು ಈಗ ಶಾಂತವಾಗಿದೆ. ಹಾಗಿರುವಾಗಿ ಗುಂಡು ಹೇಳಿಕೆ ಯಾಕೆ. ಸಚಿವರು ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ಕೆಲವರು ವಿರೋಧಿಸಿದರೆ ಮತ್ತೆ ಕೆಲವರು ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸಚಿವರ ಹೇಳಿಕೆ ವಿವಾದಕ್ಕೀಡಾಗಿದೆ.