ಎಕ್ಕೂರು, ಪಡೀಲು ನಗರ ಆರೋಗ್ಯ ಕೇಂದ್ರಗಳಿಗೆ ಸಿಪಿಎಂ ಬಜಾಲ್ ವಿಭಾಗ ಸಮಿತಿ ನಿಯೋಗ ಭೇಟಿ

ಎಕ್ಕೂರು, ಪಡೀಲು ನಗರ ಆರೋಗ್ಯ ಕೇಂದ್ರಗಳಿಗೆ ಸಿಪಿಎಂ ಬಜಾಲ್ ವಿಭಾಗ ಸಮಿತಿ ನಿಯೋಗ ಭೇಟಿ


ಮಂಗಳೂರು: ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಜೊತೆ ಮಾಡಿರುವ ಕರಾರು ಒಪ್ಪಂದ ರದ್ದುಗೊಳಿಸಲು, ಸರಕಾರಿ ಆಸ್ಪತ್ರೆಗಳ ಬಲಪಡಿಸಲು, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲು ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐಎಂ ಜಿಲ್ಲಾಧ್ಯಂತ ಕರೆ ನೀಡಿರುವ ಹೋರಾಟದ ಭಾಗವಾಗಿ ಇಂದು ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನಿಯೋಗವು ಪಡೀಲು ಮತ್ತು ಎಕ್ಕೂರು ಪ್ರದೇಶದಲ್ಲಿರುವ ಎರಡು ನಗರ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲಿಸಿದೆ.


ಮಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್, ಅಳಪೆ ದಕ್ಷಿಣ, ಅಳಪೆ ಉತ್ತರ, ಕಂಕನಾಡಿ ಬಿ, ಜಪ್ಪಿನಮೊಗರು, ಕಣ್ಣೂರು ಸಹಿತ ಸುತ್ತಮುತ್ತಲಿನ ಹಲವು ವಾರ್ಡುಗಳನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಈ ಎರಡೂ ಆರೋಗ್ಯ ಕೇಂದ್ರಗಳಿಗೆ ದಿನನಿತ್ಯ ನೂರಕ್ಕೂ ಮಿಕ್ಕಿ ವಿವಿಧ ಕಾಯಿಲೆಗಳಿಗೆ ತುತ್ತಾಗಿರುವ ಜನ ಚಿಕಿತ್ಸೆಯನ್ನು ಪಡೆಯಲು ಧಾವಿಸುತ್ತಾರೆ. ಪಡೀಲು ನಗರ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ಹೊರತು ಪಡಿಸಿ ಬಾಕಿ ಎಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವವರು. ಮಂಜೂರಾಗಿರುವ ಎರಡು ಸ್ಟಾಫ್ ನರ್ಸ್ ಹುದ್ದೆಗಳು ಕಳೆದ ಆರು ತಿಂಗಳಿನಿಂದ ಖಾಲಿ ಬಿದ್ದಿದೆ. ಐದು ಎ.ಎನ್.ಎಮ್ ಹುದ್ದೆಗೆ ಇರಬೇಕಾಗಿದ್ದ ಜಾಗದಲ್ಲಿ ಎರಡು ಹುದ್ದೆ ಖಾಲಿ ಇವೆ.


ಇನ್ನು ಎಕ್ಕೂರು ನಗರ ಆರೋಗ್ಯ ಕೇಂದ್ರದಲ್ಲಿ ಇರುವ ವೈದ್ಯರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದು ಇಲ್ಲೂ ಎ.ಎನ್.ಎಮ್ ಹುದ್ದೆಯಲ್ಲಿ ಎರಡು ಖಾಲಿ ಇವೆ. ಎರಡೂ ಕಡೆಗಳಲ್ಲಿ ಎಲ್ಲಾ ಬಗೆಯ ಔಷಧಿಗಳು ಲಭ್ಯವಿದ್ದು, ಗರ್ಭಿಣಿಯರಿಗೆ ನಡೆಸುವ ಥೈರಾಯ್ಡ್‌ನಂತಹ ರೋಗ ಪತ್ತೆ ಪರೀಕ್ಷೆಗಳು ಕೇಂದ್ರದಲ್ಲಿ ನಡೆಸಲು ವ್ಯವಸ್ಥೆ ಇಲ್ಲದ ಕಾರಣಕ್ಕೆ ಹಿಂದೆ ಅವರಿಂದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಹೊರಗೆ ಕಳುಹಿಸಲಾಗುತ್ತಿದ್ದು, ಅದರ ಹಣವನ್ನು ಸರಕಾರಗಳೇ ಬರಿಸುತ್ತಿದ್ದವು ಈಗ ಅಂತಹ ಸೇವೆಯನ್ನು ಆರೋಗ್ಯ ಇಲಾಖೆ ನಗರದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಂಪೂರ್ಣ ನಿಲ್ಲಿಸಲಾಗಿದೆ. ಇನ್ನು ನಗರ ಆರೋಗ್ಯ ಕೇಂದ್ರಗಳೆಲ್ಲವೂ ಬೆಳಗ್ಗೆ 9ರಿಂದ ಸಂಜೆ 4.30 ರವರೆಗೆ ರಜಾ ಅವಧಿಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಾಚರಿಸುತ್ತಿರುವುದರಿಂದ ಬಾಕಿ ಅವಧಿಯಲ್ಲಿ ಇಲ್ಲಿನ ಸೇವೆ ಪಡೆಯುವಲ್ಲಿ ಜನ ಸಾಮಾನ್ಯರು ವಂಚಿತರಾಗಿದ್ದಾರೆ.

ಸಿಪಿಐಎಂ ನಿಯೋಗದಲ್ಲಿದ್ದ ಜಿಲ್ಲಾ ಮುಖಂಡ ಸಂತೋಷ್ ಸಂತೋಷ್ ಬಜಾಲ್ ಮಾತನಾಡಿ, ಈ ಭಾಗದ ನಗರ ಆರೋಗ್ಯ ಕೇಂದ್ರದಲ್ಲಿ ಕಳೆದ ಹಲವು ವರುಷಗಳಿಂದ ಗುತ್ತಿಗೆಯಾಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು, ಸ್ಟಾಫ್ ನರ್ಸ್‌ಗಳ ಸಹಿತ ಎಲ್ಲಾ ಹುದ್ದೆಗಳ ಖಾಯಂಗೊಳಿಸಬೇಕು. ಗರ್ಭಿಣಿಯರಿಗೆ ಹಿಂದಿನಂತೆ ಥೈರಾಯ್ಡ್ ಸಮಸ್ಯೆ ಪತ್ತೆ ಪರೀಕ್ಷೆಗಳನ್ನು ಉಚಿತವಾಗಿ ನಡೆಸಬೇಕು. ಹಾಗೂ ಆರೋಗ್ಯ ಕೇಂದ್ರಗಳ ಸೇವಾ ಅವಧಿಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು.

ಸಿಪಿಐಎಂ ಬಜಾಲ್ ವಿಭಾಗ ಸಮಿತಿಯ ಕಾರ್ಯದರ್ಶಿ ದೀಪಕ್ ಬಜಾಲ್, ಕಂಕನಾಡಿ ಬಿ. ಕಾರ್ಯದರ್ಶಿ ಜಗದೀಶ್ ಬಜಾಲ್, ಅಶೋಕ್ ಎನೆಲ್ಮಾರ್, ಯಶ್‌ರಾಜ್ ಬಜಾಲ್, ಧೀರಾಜ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article