ಕರಾವಳಿಯಲ್ಲಿ ತಗ್ಗಿದ ಮಳೆಯ ಆರ್ಭಟ, ಆಗಸ್ಟ್ 9 ರಿಂದ ಮುಂಗಾರು ಮತ್ತಷ್ಟು ದುರ್ಬಲ ಸಾಧ್ಯತೆ!: ಗ್ರಾಮೀಣ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆ
ಮಂಗಳೂರು: ಕಳೆದ ಕೆಲವು ದಿನಗಳಿಂದ ಕರಾವಳಿಯುದ್ದಕ್ಕೂ ಅಬ್ಬರಿಸುತ್ತಿದ್ದ ಭಾರೀ ಮಳೆಯ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದ್ದು, ಬುಧವಾರ ಗ್ರಾಮೀಣ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ದಿನವಿಡೀ ಮೋಡಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಗಾಳಿ ಹಾಗೂ ಗುಡುಗು ಸಹಿತ ಮಳೆ ಸುರಿದಿದೆ.
ಗುರುವಾರ ಮತ್ತು ಶುಕ್ರವಾರ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಸಾಧಾರಣ ಗುಡುಗು ಕಾಣಿಸಿಕೊಳ್ಳಬಹುದು. ಮಳೆಯ ವಾತಾವರಣ ಮುಂದುವರಿಯುವುದರಿಂದ ಅಡಿಕೆ ಹಾಗೂ ಇತರೆ ತೋಟಗಳಿಗೆ ಔಷಧಿ ಸಿಂಪಡಣೆ ಮಾಡಲು ಸೂಕ್ತ ಅವಕಾಶ ಸಿಗುವುದು ಕಷ್ಟಕರವಾಗಬಹುದು. ಆದರೆ, ಆ.9 ರಿಂದ ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುವ ಲಕ್ಷಣಗಳಿವೆ.
ಜಿಲ್ಲೆಯಲ್ಲಿ ಒಟ್ಟು 41 ಮಿ.ಮೀ ಮಳೆ
ಬುಧವಾರ ಗರಿಷ್ಠ 32.1ಡಿ.ಸೆ ಹಾಗೂ ಕನಿಷ್ಠ 24.7ಡಿ.ಸೆ ತಾಪಮಾನ ದಾಖಲಾಗಿದೆ. ಬುಧವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 41 ಮಿ.ಮೀ ಮಳೆ ದಾಖಲಾಗಿದೆ. ಬೆಳ್ತಂಗಡಿ 39.7 ಮಿ.ಮೀ ಮಳೆಯಾಗಿದೆ. ಬಂಟ್ವಾಳ 43.4 ಮಿ.ಮೀ, ಉಳ್ಳಾಲದಲ್ಲಿ 17.9 ಮಿಮಿ, ಮೂಡುಬಿದಿರೆ 54.3 ಮಿ.ಮೀ, ಕಡಬದಲ್ಲಿ 53 ಮಿಮಿ, ಪುತ್ತೂರು 32.6 ಮಿ.ಮೀ, ಮಂಗಳೂರಿನಲ್ಲಿ 29.7 ಮಿಮಿ, ಸುಳ್ಯದಲ್ಲಿ 40.5 ಮಿ.ಮೀ., ಮೂಲ್ಕಿ 30.5 ಮಿ.ಮೀ. ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ನದಿನೀರಿನ ಮಟ್ಟ ನೇತ್ರಾವತಿ ನದಿ (ಬಂಟ್ವಾಳ) 6.50 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 26 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.575 ಮೀ, ಗುರುಪುರ ನದಿ (ಅಡ್ಡೂರು) 3.50 ಮೀ ನೀರಿದೆ.
ಮುಂಗಾರು ದುರ್ಬಲಗೊಳ್ಳಲು ಜಪಾನ್ ಚಂಡಮಾರುತ ಕಾರಣ!
ಪ್ರಸ್ತುತ ಜಪಾನ್ನ ದಕ್ಷಿಣ ಕರಾವಳಿಯಲ್ಲಿ ಸೃಷ್ಟಿಯಾಗಿರುವ ಬೃಹತ್ ಚಂಡಮಾರುತವು ಬಂಗಾಳಕೊಲ್ಲಿಯ ಗಾಳಿಯನ್ನು ತನ್ನತ್ತ ಸೆಳೆಯುತ್ತಿದೆ. ಇದರಿಂದಾಗಿ ಆಸ್ಟ್ರೇಲಿಯಾ ಕಡೆಯಿಂದ ಬೀಸುವ ಮಾನ್ಸೂನ್ ಮಾರುತಗಳು ನೇರವಾಗಿ ಬಂಗಾಳಕೊಲ್ಲಿಯನ್ನು ಸೇರುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಭಾರತದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.