ಮಹಿಳಾ ಸಬಲೀಕರಣಕ್ಕೆ ಅರ್ಹತೆ, ಆತ್ಮವಿಶ್ವಾಸವೇ ಬಲ: ಶ್ಯಾಮಲಾ ಎಸ್. ಕುಂದರ್

ಮಹಿಳಾ ಸಬಲೀಕರಣಕ್ಕೆ ಅರ್ಹತೆ, ಆತ್ಮವಿಶ್ವಾಸವೇ ಬಲ: ಶ್ಯಾಮಲಾ ಎಸ್. ಕುಂದರ್


ಮೂಡುಬಿದಿರೆ: ಮಹಿಳಾ ಸಬಲೀಕರಣವೆಂದರೆ ಕೇವಲ ಮೀಸಲಾತಿ ಅಥವಾ ಅವಕಾಶಗಳನ್ನು ಪಡೆಯುವುದಲ್ಲ; ತನ್ನ ಸಾಮರ್ಥ್ಯ, ಅರ್ಹತೆ ಹಾಗೂ ಆತ್ಮವಿಶ್ವಾಸದ ಮೂಲಕ ಸಮಾಜದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಳ್ಳುವುದಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ವಿಶ್ರಾಂತ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಸಂಘಟನೆ ‘ಸಕ್ಷಮಾ’ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳಾ ಸಬಲೀಕರಣ’ ವಿಷಯದ ಕುರಿತು ಮಾತನಾಡಿದರು. ಮಹಿಳೆಯರು ತಮ್ಮ ಹಕ್ಕುಗಳು, ಕರ್ತವ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಜಾಗೃತರಾಗಬೇಕು ಎಂದರು.

ಮಹಿಳೆಯಲ್ಲಿ ಅಪಾರವಾದ ಅರ್ಹತೆ ಮತ್ತು ಸಾಮರ್ಥ್ಯವಿದೆ. ಯಾವುದೇ ಅನುಕಂಪದ ಆಧಾರದ ಮೇಲೆ ಅವಕಾಶವನ್ನು ಬೇಡುವ ಅಗತ್ಯವಿಲ್ಲ. ನಮ್ಮ ಅರ್ಹತೆ, ಪರಿಶ್ರಮ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅವಕಾಶ ನೀಡಿ ಎಂದು ಕೇಳುವ ಆತ್ಮವಿಶ್ವಾಸ ಮಹಿಳೆಯರಲ್ಲಿ ಬರಬೇಕು ಎಂದರು.

ಮಹಿಳೆಯರಿಗೆ ಆಸ್ತಿ ಸೇರಿದಂತೆ ಕಾನೂನುಬದ್ಧವಾಗಿ ದೊರೆಯುವ ಹಕ್ಕುಗಳ ಬಗ್ಗೆ ಅರಿವು ಮೂಡಬೇಕು. ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ಇತರರ ಹಕ್ಕುಗಳನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಮಹಿಳಾ ಸಬಲೀಕರಣವು ಮಹಿಳೆಯರ ಬದುಕನ್ನು ಮಾತ್ರ ಬದಲಿಸುವ ಪ್ರಕ್ರಿಯೆಯಲ್ಲ, ಅದು ಕುಟುಂಬ, ಸಮಾಜ ಮತ್ತು ದೇಶದ ಪ್ರಗತಿಗೆ ದಾರಿ ಮಾಡಿಕೊಡುವ ಶಕ್ತಿಯಾಗಿದೆ. ಆದ್ದರಿಂದ ಮಹಿಳೆಯರು ಆತ್ಮವಿಶ್ವಾಸದಿಂದ ಮುಂದೆ ಬಂದು ತಮ್ಮ ಹಕ್ಕು, ಅರ್ಹತೆ ಮತ್ತು ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾಯ೯ಕ್ರಮದಲ್ಲಿ ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ  ಹಾಗೂ ಸಕ್ಷಮ ವೇದಿಕೆಯ ಸಂಚಾಲಕಿ ಡಾ ಗ್ರೀಷ್ಮಾ ವಿವೇಕ ಆಳ್ವ, ಕಾರ‍್ಯಕ್ರಮ ಸಂಯೋಜಕಿ ಡಾ. ಅರ್ಚನಾ ಪ್ರಭಾತ್ ಹಾಗೂ ಸಂಘಟನೆಯ ಸದಸ್ಯರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article