ಪುತ್ತೂರಿನಲ್ಲಿ ನಾಳೆ ಸ್ವಯಂಪ್ರೇರಿತ ಬಂದ್-ಹಿಜಾವೇ ಕರೆ: ಬಿಜೆಪಿ, ವಿಎಚ್ಪಿ ಬಜರಂಗದಳ ಬೆಂಬಲ ಘೋಷಣೆ
ಪುತ್ತೂರು: ದರ್ಬೆಯಲ್ಲಿ ಮಹಿಳೆಯ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಹಿಂದೂ ಜಾಗರಣಾ ವೇದಿಕೆ ಆ.25ರಂದು ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಿದೆ.
ದರ್ಬೆಯ ಗ್ರೀಮ್ ಡೆಸ್ಟಿನೇಷನ್ ಜನಸೇವಾ ಕೇಂದ್ರದಲ್ಲಿ ಜನನಪತ್ರ ದಾಖಲೆಯನ್ನು ಲ್ಯಾಮಿನೇಷನ್ ಮಾಡುವ ಸಂದರ್ಭ ತಾಂತ್ರಿಕ ದೋಷದಿಂದ ದಾಖಲೆ ಸುಟ್ಟು ಹೋದ ಪ್ರಕರಣದಲ್ಲಿ ಅಂಗಡಿ ಮಾಲಕಿ ಅಂಜನಾ ಪೈ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಈ ಸ್ವಯಂಪ್ರೇರಿತ ಬಂದ್ ಗೆ ಕರೆನೀಡಿದೆ. ಈ ಘಟನೆಯ ಹಿಂದೆ ನಿಷೇಧಿತ ಸಂಘಟನೆಯಾದ ಪಿಎಫ್ಐಯ ವ್ಯವಸ್ಥಿತ ಪಿತೂರಿ ಇದೆ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆ ಈ ಘಟನೆಯಲ್ಲಿ ಪೊಲೀಸರ ವೈಫಲ್ಯವನ್ನು ಖಂಡಿಸಿದೆ.
ನಗರದ ವರ್ತಕರ ಹಿತರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಕಾಪಾಡುವ ಉದ್ದೇಶದಿಂದ ಪುತ್ತೂರಿನ ಎಲ್ಲಾ ಸಮಾಜದ ಭಾಂದವರು ಹಾಗೂ ನಾಗರಿಕರು ಈ ಸ್ವಯಂಪ್ರೇರಿತ ಬಂದ್ಗೆ ಸಹಕಾರ ನೀಡುವಂತೆ ಜಾಗರಣಾ ವೇದಿಕೆಯ ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು ಪತ್ರಿಕಾ ಹೇಳಿಕೆ ಮೂಲಕ ವಿನಂತಿ ಮಾಡಿದ್ದಾರೆ.
ಬಿಜೆಪಿ-ವಿಎಚ್ಪಿ-ಬಜರಂಗದಳ ಬೆಂಬಲ:
ಹಿಂದೂ ಜಾಗರಣಾ ವೇದಿಕೆ ಕರೆ ನೀಡಿರುವ ಸ್ವಯಂಪ್ರೇರಿತ ಬಂದ್ಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ದರ್ಭೆಯ ಘಟನೆಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ, ಮಹಿಳೆಯ ಮೇಲಿನ ಹಲ್ಲೆ, ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿದೆ. ಇಂತಹ ಬೆಳವಣಿಗೆಯನ್ನು ಖಂಡಿಸುವ ಜತೆಗೆ ಸ್ವಯಂಪ್ರೇರಿತ ಬಂದ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಂಘಟನೆಗಳು ತಿಳಿಸಿವೆ. ನಗರದಾದ್ಯಂತ ಅಂಗಡಿಗಳನ್ನು ಮುಚ್ಚುವ ಮೂಲಕ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ಗೆ ಸಹಕರಿಸುವಂತೆ ಸಂಘಟನೆಗಳು ಜನತೆಯಲ್ಲಿ ಮನವಿ ಮಾಡಿವೆ.