ಪೋಕ್ಸೋ ಆರೋಪಿ ಬಂಧನಕ್ಕೆ ಆಗ್ರಹ,ಕಾಂಗ್ರೆಸ್ ನಾಯಕರ ಮನೆಯಲ್ಲಿ ಹುಡುಕಿ: ಹಕೀಂ ಕೂರ್ನಡ್ಕ
ಪುತ್ತೂರು: ಶಾಸಕ ಅಶೋಕ್ ರೈ ಆಪ್ತನಿಂದ ಬಾಲಕಿಗೆ ಲೈಂಗಿಕ ಕಿರುಕುಳ ನಡೆದು ಪೋಕ್ಸೋ ಪ್ರಕರಣ ದಾಖಲಾಗಿ ಐದು ದಿನಗಳು ಕಳೆದರೂ ಆರೋಪಿಯ ಬಂಧನವಾಗಿಲ್ಲ. ಬೆಂಗಳೂರಿನ ಪುತ್ತೂರು ಶಾಸಕರ ವಸತಿಯಲ್ಲಿ ಅಥವಾ ಕಾಂಗ್ರೆಸ್ ನಾಯಕರ ಮನೆಯಲ್ಲಿ ಪೊಲೀಸರು ಹುಡುಕಿದರೆ ಆರೋಪಿ ಸಿಗಬಹುದು ಎಂದು ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಆರೋಪ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದು ಪಡೀಲ್ ಮೇಲೆ ಶಾಸಕರು ಮೃದು ಧೋರಣೆ ತೋರುತ್ತಿದ್ದಾರೆ. ಬೇರೆಲ್ಲ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಸ್ಟ್ರಾಂಗ್ ಇದೆ, ಅದ್ದು ಪಡೀಲ್ ಪ್ರಕರಣದಲ್ಲಿ ವೀಕ್ ಆಗಿದೆ ಎಂದರು.
ಈ ಹಿಂದಿನಿಂದಲೇ ಅದ್ದು ಪಡೀಲ್ ವಾಹನದಲ್ಲಿ ಸ್ಕಿಡ್ ಆಗಿ ಬಿದ್ದು ಬಜರಂಗದಳ, ವಿಹಿಂಪದವರು ಹಲ್ಲೆ ಮಾಡಿದ್ದಾರೆ ಎಂದು ಆಸ್ಪತ್ರೆಗಳಲ್ಲಿ ದಾಖಲಾಗುವ ಅಭ್ಯಾಸ ಇಟ್ಟುಕೊಂಡಿದ್ದು, ಕೋಮು ಪ್ರಚೋದನೆಯ ಚಾಳಿ ಈತನಿಗಿದೆ. ನಗರಸಭೆಯ ಹಿಂದುಳಿದ ಸಮುದಾಯದ ಮಹಿಳೆಗೆ ನಿಂದಿಸಿ 15 ದಿನ ಜೈಲಿನಲ್ಲಿದ್ದಾಗ ಶಾಸಕ ಅಶೋಕ್ ರೈ ಅವರೇ ದುಡ್ಡು ಕೊಟ್ಟು ಆತನನ್ನು ಬಿಡುಗಡೆ ಮಾಡಿದ್ದರು ಎಂದು ಆರೋಪಿಸಿದರು.
ಅದ್ದು ಪಡೀಲ್ ಹಿಂದೆ ಅಶ್ಲೀಲ ವೀಡಿಯೋ ಮಾಡಿ ವೈರಲ್ ಆದರೂ ಶಾಸಕರು ಪಾಠ ಕಲಿತಿಲ್ಲ. ಈದ್ ಸಂದರ್ಭದಲ್ಲಿ ಶಾಸಕರು ಮುಸ್ಲಿಂ ಗುರುಗಳಿಗೆ ಶುಭಾಶಯ ಕೋರುವ ಬದಲು ಅದ್ದು ಪಡೀಲ್ ಮನೆಗೆ ಹೋಗಿ ಶುಭಾಶಯ ಕೋರಿದ್ದರು. ನಾವು ಪ್ರಚಾರ ಮಾಡಿ ಶಾಸಕರನ್ನು ಗೆಲ್ಲಿಸಿದ್ದು. ಆದರೆ ದಲಿತ ಮುಸ್ಲಿಮರ ಮೇಲೆ ಇವರಿಗೆ ಗೌರವವಿಲ್ಲ. ಅದ್ದು ಪಡೀಲ್ ಇದುವರೆಗೆ ಕಾಂಗ್ರೆಸ್ ಸದಸ್ಯತ್ವವನ್ನೇ ಪಡೆದಿಲ್ಲ. ಅದ್ದುನ ಕುರಿತು ಮಾತನಾಡಿದರೆ ಬೆದರಿಸುತ್ತಾನೆ. ಶಾಸಕರ ವೀಡಿಯೋ ಆತನಲ್ಲಿರುವ ಸಾಧ್ಯತೆಯಿದೆ ಎಂದು ಹೇಳಿದರು.
ಪ್ರಕರಣಗಳ ಬಗ್ಗೆ ಮೌನ ಯಾಕೆ?
ಎಲೆಕ್ಟ್ರಿಕ್ ಕಂಬದಲ್ಲಿ ಕಾಗೆ ಸತ್ತರೂ ಪ್ರಚಾರ ಪಡೆಯುವ ಅಶೋಕ್ ರೈ ಅವರು ದರ್ಬೆಯಲ್ಲಿ ನಡೆದ ಘಟನೆಯ ಬಗ್ಗೆ ಯಾಕೆ ಮಾತನಾಡುವುದಿಲ್ಲ?, ತಮ್ಮ ಆಪ್ತನ ಪೋಕ್ಸೋ ಪ್ರಕರಣದ ಬಗ್ಗೆಯೂ ಮಾತನಾಡಿಲ್ಲ. ರಾಜಕೀಯ ಲಾಭಕ್ಕಾಗಿ ಅಶೋಕ್ ರೈ ಅವರೇ ಪ್ರಚೋದನೆ ಕೊಡುತ್ತಿದ್ದಾರೆ. ಇಲ್ಲದಿದ್ದರೆ ಹೇಳಿಕೆ ಕೊಡುತ್ತಿದ್ದರು. ಮಹಿಳಾ ಕಾಂಗ್ರೆಸ್ ಎಲ್ಲಿ ಹೋಗಿದೆ?, ಅಶೋಕ್ ರೈ ಅವರು ಮಾತನಾಡಲು ಬಾರದವರನ್ನು ಪಕ್ಷದಲ್ಲಿ ಜವಾಬ್ದಾರಿ ನೀಡಿದ್ದಾರೆ. ಇವರೆಲ್ಲ ಧಮ್ ಇದ್ದರೆ ನಮ್ಮ ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆ ಎಂದು ಹೇಳಲಿ. ಬಡವರಿಗೆ ರೂ. 100 ಕೊಟ್ಟು ನಾನು ಎಂಎಲ್ಎ ಹೇಳುವುದೇ ಅಶೋಕ್ ರೈ ಸಾಧನೆ ಎಂದು ಹೇಳಿದರು.
ಮೆಡಿಕಲ್ ಕಾಲೇಜು ಅನುದಾನ ಹೌದೇ?:
ಪುತ್ತೂರು ಮೆಡಿಕಲ್ ಕಾಲೇಜಿಗೆ 500 ಕೋಟಿ ಅನುದಾನ ಎಲ್ಲಿಂದ ಬಂದಿದೆ. ಬಜೆಟ್ನಲ್ಲಿ ಇಡದ ಹಣ ಎಲ್ಲಿ ಸಿಗುತ್ತದೆ. ಸಿಎಂ, ಅಧ್ಯಕ್ಷರು ಹೇಳಿದ್ದಾರಾ?, ಅದಕ್ಕೂ ಮುಂಚಿತವಾಗಿ 300 ಬೆಡ್ ಆಸ್ಪತ್ರೆ ಆಗಿದಾ? ಎಂದು ಪ್ರಶ್ನಿಸಿದ ಹಕೀಂ ಕೂರ್ನಡ್ಕ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ 1 ರೂ. ಕೂಡ ಬಿಡುಗಡೆಯಾಗಿಲ್ಲ. ಅನುದಾನದ ಬಗ್ಗೆ ಸಾಕ್ಷಿ ಬಿಡುಗಡೆ ಮಾಡಿದರೆ ಅಶೋಕ್ ರೈ ಕುರಿತು ಮಾತನಾಡುವುದನ್ನು ನಿಲ್ಲಿಸುತ್ತೇನೆ ಎಂದು ಸವಾಲು ಹಾಕಿದರು.
ಶಾಸಕ ಅಶೋಕ್ ರೈ ಅವರು ಹಿಂದಿನ ಶಾಸಕ ಸಂಜೀವ ಮಠಂದೂರು ಅವರನ್ನು ನೋಡಿ ಕಲಿಯಬೇಕು. ಅವರು ಮುಸ್ಲಿಂ ಸಮುದಾಯಕ್ಕೆ ಅನುದಾನಗಳನ್ನು ಕೊಟ್ಟಿದ್ದಾರೆ. ಅವರ ಅನುದಾನದಲ್ಲಿ ದರ್ಬೆಯಲ್ಲಿ ನಿರ್ಮಿಸಲಾಗಿರುವ ಅಲ್ಪಸಂಖ್ಯಾತ ಸಮುದಾಯ ಭವನ ಮುಂದೆ ಯಾವುದಾದರೂ ಟ್ರಸ್ಟ್ಗೆ ಕೊಡುವ ಸಾಧ್ಯತೆಯೂ ಇದೆ ಎಂದು ವ್ಯಂಗ್ಯವಾಡಿದರು.