ಗ್ರಾಹಕನ ದೂರು: ತೊಕ್ಕೊಟ್ಟು ಹೋಟೆಲ್ ಗೆ ಆರೋಗ್ಯಾಧಿಕಾರಿಗಳ ದಾಳಿ
Wednesday, August 26, 2026
ಉಳ್ಳಾಲ: ಸಾಂಬಾರಿನಲ್ಲಿ ಜಿರಳೆಯಿದೆಯೆಂದು ಗ್ರಾಹಕನೋರ್ವನು ದೂರು ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಅವರು ತೊಕ್ಕೊಟ್ಟುವಿನ ವೃಂದಾವನ ಹೊಟೇಲಿಗೆ ದಿಢೀರ್ ದಾಳಿ ನಡೆಸಿ ಅಡುಗೆ ಕೋಣೆಯನ್ನು ತಪಾಸಣೆ ನಡೆಸಿದ್ದು,ಶುಚಿತ್ವ ಕಾಪಾಡದ ಮಾಲಕರಿಗೆ ನೋಟೀಸು ನೀಡಿ,ಎಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
ಮಧ್ಯಾಹ್ನ 1.30 ಗಂಟೆಗೆ ಅಧಿಕಾರಿ ಹಾಗೂ ಚಾಲಕ ಇಬ್ಬರು ಶಟರ್ ಹಾಕಿ ತಪಾಸಣೆ ಕೈಗೊಂಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಾ.ಪ್ರವೀಣ್ ಕುಮಾರ್ ಅವರು ಗ್ರಾಹಕನೋರ್ವನು ಸಾಂಬಾರಿನಲ್ಲಿ ಜಿರಳೆಯಿದೆಯೆಂದು ದೂರು ನೀಡಿರುವ ನಿಟ್ಟಿನಲ್ಲಿ ದಾಳಿ ನಡೆಸಲಾಗಿದೆ.ಹೊಟೇಲಿನ ಅಡುಗೆ ಕೋಣೆಯಲ್ಲಿ ಆಹಾರ ದಾಸ್ತಾನು ಮಾಡಲು ಪ್ರತ್ಯೇಕ ಕೊಠಡಿಯಿಲ್ಲದೆ,ಎಲ್ಲೆಂದರಲ್ಲಿ ಆಹಾರ ಪದಾರ್ಥಗಳನ್ನು ರಾಶಿ ಹಾಕಲಾಗಿತ್ತು.ಎಲ್ಲಾ ಆಹಾರ ಪದಾರ್ಥಗಳ ತೆರವುಗೊಳಿಸಿ ಅಡುಗೆ ಕೋಣೆ ತೊಳೆಸಿ ಶುಚಿಗೊಳಿಸಲಾಗಿದೆ.ಆಹಾರ ಪದಾರ್ಥಗಳ ಪ್ರತ್ಯೇಕವಾಗಿ ಜೋಡಿಸಿಡಲು ಹೊಟೇಲು ಮಾಲಕರಿಗೆ ನಿರ್ದೇಶನ ನೀಡಲಾಗಿದೆ.ಶುಚಿತ್ವ ಕಾಪಾಡದ ನಿಟ್ಟಿನಲ್ಲಿ ಹೊಟೇಲು ಮಾಲಕರಿಗೆ ನೋಟೀಸು ನೀಡಿ,ಎಡಿಸಿ (ಅಪರ ಜಿಲ್ಲಾಧಿಕಾರಿ)ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.