ಸಂಪಿಗೆ ಮರ ತೆರವು ಮಾಡಲು ಬಿಡುವುದಿಲ್ಲ

ಸಂಪಿಗೆ ಮರ ತೆರವು ಮಾಡಲು ಬಿಡುವುದಿಲ್ಲ


ಮಂಗಳೂರು: ನಗರದ ನಂತೂರಿನ ರಾಷ್ಟ್ರೀಯ ಹೆದ್ದಾರಿ ನಡುವಲ್ಲಿ ಇರುವ ಸಂಪಿಗೆ ಮರವನ್ನು ತೆರವು ಮಾಡುವಂತಿಲ್ಲ. ಯಾವುದೇ ಕಾರಣಕ್ಕು ಸಂಪಿಗೆ ಮರವನ್ನು ಬಿಟ್ಟು ಕೊಡಲ್ಲ ಎಂದು ಸ್ಥಳೀಯ ದೈವದ ಕೋಲದಲ್ಲಿ ರಾಹುಗುಳಿಗ ಎಚ್ಚರಿಕೆಯ ನುಡಿಯಾಡಿದ ಪ್ರಸಂಗ ನಡೆದಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. 

ನಂತೂರು ಪದವಿನ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಸಂಪಿಗೆ ಮರವೊಂದಿದ್ದು ಅದನ್ನು ಎದುರಲ್ಲೇ ಇರುವ ರಾಹುಗುಳಿಗ ದೈವದ ಗುಡಿಗೆ ಸೇರಿದ ಮರ ಎನ್ನಲಾಗುತ್ತಿದೆ. ತನ್ನ ನ್ಯಾಯ ಪೀಠ ಇರುವ ಸಂಪಿಗೆ ಮರವನ್ನು ತೆಗೆಯಲು ಬಿಡಲ್ಲ ಎಂದು ದೈವ ಇತ್ತೀಚೆಗೆ ಸಂಕ್ರಾಂತಿ ಕೋಲದ ಸಂದರ್ಭದಲ್ಲಿ ನೆಲಕ್ಕೆ ಕೈಯಿಟ್ಟು ಎಚ್ಚರಿಕೆ ನುಡಿಯಾಡಿದೆ. ಹಲವು ವರ್ಷಗಳ ತೂಗುಯ್ಯಾಲೆ ಬಳಿಕ ನಂತೂರಿನಲ್ಲಿ ಕಡೆಗೂ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಡೆಯುತ್ತಿದ್ದು ಅದಕ್ಕೀಗ ರಾಹು ಗುಳಿಗನ ಸಂಪಿಗೆ ಮರ ಅಡ್ಡಿಯಾಗಿದೆ ಎನ್ನುವ ನೆಪವನ್ನು ಈಗ ಮುಂದಿಡಲಾಗಿದೆ. 

ನಂತೂರು ಹೆದ್ದಾರಿ ಬದಿಯಲ್ಲೇ ರಾಹುಗುಳಿಗ ಬಬ್ಬುಸ್ವಾಮಿ ದೈವಸ್ಥಾನವಿದ್ದು ಅದಕ್ಕೆ ಯಾವುದೇ ತೊಂದರೆ ಇಲ್ಲ. ಅದರ ನೇರ ಎದುರಿರುವ ಹೆದ್ದಾರಿ ಮಧ್ಯದ ಸಂಪಿಗೆ ಮರವನ್ನು ತೆಗೆಯಬೇಕೆಂಬ ಪ್ರಸ್ತಾಪ ಹೆದ್ದಾರಿ ಇಲಾಖೆಯಿಂದ ಬಂದಿದೆ. ಸಂಪಿಗೆ ಮರದಲ್ಲಿ ರಾಹುಗಳಿಗ ದೈವ ನೆಲೆಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದು ದೈವದ ಕೋಲ ಸಂದರ್ಭದಲ್ಲಿ ಮರಕ್ಕೆ ಹತ್ತಿ ನರ್ತನ ಮಾಡುವ ಕ್ರಮ ಇದೆ. 

ನಂತೂರಿನಲ್ಲಿ ಫ್ಲೈ ಓವರ್ ನಿರ್ಮಾಣದ ಪ್ರಸ್ತಾಪವಿದ್ದು, ಮರವನ್ನು ಕಡಿಯಬೇಕಾಗುತ್ತದೆ ಎನ್ನುವ ಮಾತು ಕೇಳಿಬಂದಿದೆ. ಅದಕ್ಕೆ ಮುನ್ನವೇ ಸ್ಥಳೀಯ ಭಕ್ತರು ಮರ ಕಡಿಯುವ ಕುರಿತಾಗಿ ದೈವದ ಬಳಿ ಪ್ರಾರ್ಥನೆ ಸಲ್ಲಿಸಿದ್ದು, ಆಗ ಮರವನ್ನು ಯಾವ ಕಾರಣಕ್ಕೂ ಕಡಿಯಬಾರದು ಎಂದು ದೈವ ಹೇಳಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article