ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಮಕ್ಕಳ ಪ್ರತಿಭೆಗೆ ವೇದಿಕೆ: ಬ್ರಹ್ಮಾಕುಮಾರೀಸ್
ಮಕ್ಕಳಲ್ಲಿ ಶ್ರೀಕೃಷ್ಣನ ಜೀವನಮೌಲ್ಯಗಳು, ಸತ್ಯ, ಪ್ರೀತಿ, ಪಾವಿತ್ರ್ಯ, ಧೈರ್ಯ, ಕರುಣೆ ಹಾಗೂ ಸದ್ಗುಣಗಳನ್ನು ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಕ್ಕಳು ಶ್ರೀಕೃಷ್ಣನ ವಿವಿಧ ರೂಪಗಳಲ್ಲಿ ಸುಂದರವಾಗಿ ವೇಷಧರಿಸಿ, ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಪ್ರದರ್ಶಿಸಿದರು.
ಸ್ಪರ್ಧೆಯನ್ನು ಮುದ್ದು ಕೃಷ್ಣ – 2ರಿಂದ 4 ವರ್ಷ, ಬಾಲ ಕೃಷ್ಣ – 5ರಿಂದ 7 ವರ್ಷ ಹಾಗೂ ಕಿಶೋರ ಕೃಷ್ಣ – 8ರಿಂದ 10 ವರ್ಷ ಎಂಬ ಮೂರು ವಿಭಾಗಗಳಲ್ಲಿ ನಡೆಸಲಾಯಿತು. ಮಕ್ಕಳ ವೇಷಭೂಷಣ, ಅಲಂಕಾರ, ಶ್ರೀಕೃಷ್ಣನ ಪಾತ್ರದ ಅಭಿವ್ಯಕ್ತಿ, ಆತ್ಮವಿಶ್ವಾಸ, ವೇದಿಕೆಯ ಮೇಲಿನ ನಿರ್ವಹಣೆ ಹಾಗೂ ಕೃಷ್ಣನ ಗುಣಗಳನ್ನು ಪ್ರತಿಬಿಂಬಿಸುವ ರೀತಿಯನ್ನು ಪರಿಗಣಿಸಿ ತೀರ್ಪು ನೀಡಲಾಯಿತು. ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ನಕುಲ ಕೃಷ್ಣ ದಾಸ್, ಶ್ರೀಮತಿ ಇಂದಿರಾಕ್ಷಿ ಐ. ಶೆಟ್ಟಿ, ಶ್ರೀಮತಿ ನಳಿನಿ ಶೆಟ್ಟಿ, ಶ್ರೀ ಯೋಗೇಶ್ ಪೂಜಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
“ಕೃಷ್ಣನನ್ನು ಕೇವಲ ವೇಷದಲ್ಲಿ ಅಲ್ಲ, ಗುಣಗಳಲ್ಲಿ ಕಾಣೋಣ”: ಬಿ.ಕೆ. ವಿಶ್ವೇಶ್ವರಿ
ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರಿ ಬಿ.ಕೆ. ವಿಶ್ವೇಶ್ವರಿ ಅವರು ಆಧ್ಯಾತ್ಮಿಕ ಸಂದೇಶ ನೀಡುತ್ತಾ, “ಶ್ರೀಕೃಷ್ಣ ಎಂದರೆ ಕೇವಲ ಒಂದು ಸುಂದರ ವೇಷವಲ್ಲ; ಅವರು ಪಾವಿತ್ರ್ಯ, ಪ್ರೀತಿ, ಶಾಂತಿ, ಸತ್ಯತೆ ಮತ್ತು ದೈವಿಕ ಗುಣಗಳ ಪ್ರತೀಕ. ಮಕ್ಕಳು ಕೃಷ್ಣನ ವೇಷ ಧರಿಸುವುದರ ಜೊತೆಗೆ ಅವರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮವು ಮಕ್ಕಳ ಉತ್ಸಾಹ, ಪೋಷಕರ ಸಹಕಾರ ಮತ್ತು ಭಕ್ತಿಪೂರ್ಣ ವಾತಾವರಣದೊಂದಿಗೆ ಯಶಸ್ವಿಯಾಗಿ ನಡೆಯಿತು.