‘ರಾಜ್ಯದಲ್ಲಿರುವುದು ಭ್ರಷ್ಟಾಚಾರ, ಲಂಚ ಗ್ಯಾರಂಟಿಯ ಸರಕಾರ: ಶಾಸಕ ಡಾ. ವೈ. ಭರತ್ ಶೆಟ್ಟಿ
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಸಚಿವರುಗಳೇ ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಇದೀಗ ಬಟಾ ಬಯಲಾಗಿದೆ. ಆಡಳಿತ ಪಕ್ಷದ ಶಾಸಕರೇ ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ ಎಂದರು.
ರಾಜ್ಯ ಸಚಿವ ಸಂಪುಟದಲ್ಲಿ ಪೇಮೆಂಟ್ ಕೋಟಾದಡಿ ಸಚಿವರಾದವರು ಪೇಮೆಂಟ್ ಅಧಿಕಾರಿಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯ ಲೋಕಾಯುಕ್ತ ಎನ್.ಬಿ. ವೀರಪ್ಪ ಅವರು ಕರ್ನಾಟಕದಲ್ಲಿ 100ರಲ್ಲಿ 63ಮಂದಿ ಲಂಚ ಕೊಡಬೇಕಾಗಿದೆ ಎಂದು ಹೇಳಿರುವುದು ರಾಜ್ಯದ ಭ್ರಷ್ಟಾಚಾರದ ಕೈಗನ್ನಡಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಲಂಚ ಗ್ಯಾರಂಟಿಯ ಸರಕಾರ ಆಡಳಿತ ನಡೆಸುತ್ತಿರುವುದುವುದು ಸ್ಪಷ್ಟವಾಗಿದೆ ಎಂದರು.
ಮುಡಾ, ಕೆಪಿಎಸ್ಸಿ ಸೇರಿದಂತೆ ರಾಜ್ಯ ಸರಕಾರದಲ್ಲಿ ಒಂದರ ಹಿಂದೆ ಒಂದು ಭ್ರಷ್ಟಾಚಾರಗಳು ಹೊರಬರುತ್ತಿವೆ. ಪೊಲೀಸ್ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಈಗಾಗಲೇ ರಾಜ್ಯ ಬಿಜೆಪಿ ಪಾದಯಾತ್ರೆ ಆರಂಭಿಸಿದೆ. ಕೆಆರ್ಡಿಎಲ್ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಯಬೇಕೆಂದು ಹೇಳಿದರು.
ಸಚಿವ ಬಸವರಾಜರಾಯ ರೆಡ್ಡಿ ಮುಸ್ಲಿಂ ಧರ್ಮ ಶ್ರೇಷ್ಟ ಎಂದು ಹೇಳಿಕೆ ನೀಡಿರುವುದರ ಹಿಂದೆ ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ನಾಣ್ನುಡಿ ಒಪ್ಪುತ್ತದೆ. ಈ ರೀತಿ ಹೇಳಿಕೆ ನೀಡುವ ಇವರು ಚುನಾವಣೆ ಸಮೀಪಿಸುವಾಗ ದೇವಸ್ಥಾನ ಎದುರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಈಗ ಹೊಟ್ಟೆಪಾಡಿಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದು, ಅದಕ್ಕೆ ತಕ್ಕ ಶಾಸ್ತಿ ಮುಂದೆ ಸಿಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಬಿಜೆಪಿ ಪ್ರಮುಖರಾದ ಸಂದೀಪ್ ಪಚ್ಚನಾಡಿ, ಬಿಜೆಪಿ ಕಚೇರಿ ಕಾರ್ಯದರ್ಶಿ ಗುರುಚರಣ್, ಮಾಧ್ಯಮ ಸಂಚಾಲಕ ಅರುಣ್ ಶೇಟ್ ಉಪಸ್ಥಿತರಿದ್ದರು.