ಕರ್ಣಾಟಕ ಬ್ಯಾಂಕ್ “ಸ್ವರ ತರಂಗ್” ಸಂಗೀತ
ಮಂಗಳೂರು: ಸಂಗೀತ ಭಾರತೀ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ಕರ್ಣಾಟಕ ಬ್ಯಾಂಕ್ “ಸ್ವರ ತರಂಗ್” ಸಂಗೀತ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲಿದಲ್ಲಿ ಸೆ.27 ರಂದು ಸಂಜೆ 5.30 ರಿಂದ ನಡೆಯಲಿದೆ.
ಕಾರ್ಯಕ್ರಮದ ಪೂರ್ವಾರ್ಧದಲ್ಲಿ ಕೊಲ್ಕತ್ತದ ವಿದುಷಿ ರುಚಿರ ಪಾಂಡ ಇವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಉತ್ತರ ಕನ್ನಡದ ಸತೀಶ್ ಭಟ್ ಹೆಗ್ಗಾರ್ ಅವರು ಹಾರ್ಮೋನಿಯಂ ನಲ್ಲಿ ಹಾಗೂ ಮುಂಬೈನ ಯುವ ತಬ್ಲಾ ಪಟು ಯಶವಂತ್ ವೈಷ್ಣವ್ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮದ ಉತ್ತರಾರ್ಧದಲ್ಲಿ ನವ ದೆಹಲಿಯ ಅಭಯ್ ರುಸ್ತುಂ ಸಪೋರಿ ಇವರಿಂದ ‘ಸಂತೂರ್ ವಾದನ’ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಮುಂಬೈನ ಯುವ ತಬ್ಲಾ ಪಟು ಯಶವಂತ್ ವೈಷ್ಣವ್ ಸಾಥ್ ನೀಡಲಿದ್ದಾರೆ.
ಸಂಗೀತ ಭಾರತಿ ಫೌಂಡೇಶನ್ ದೇಶದ ಪ್ರತಿಷ್ಠಿತ ಕಲಾವಿದರ ಸಂಗೀತ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆಯೋಜಿಸುತ್ತಾ, ಬರುತ್ತಿದೆ. ಈ ಮೂಲಕ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸುವುದಲ್ಲದೆ, ಸಂಗೀತ ಪ್ರಿಯರಿಗೆ ಸಂಗೀತ ಆಸ್ವಾದನೆಯ ಅವಕಾಶ ಕಲ್ಪಿಸುತ್ತಿದೆ.
ಈ ಕಾರ್ಯಕ್ರಮಕ್ಕೆ ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಾಯೋಜಕತ್ವವನ್ನು ನೀಡಿದೆ. ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಸಂಗೀತ ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷನರೇಂದ್ರ ಎಲ್. ನಾಯಕ್ ಕೋರಿದ್ದಾರೆ.