ಮೂಡುಬಿದಿರೆಯಲ್ಲಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ

ಮೂಡುಬಿದಿರೆಯಲ್ಲಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ


ಮೂಡುಬಿದಿರೆ: ಸರಕಾರದ ಯೋಜನೆಗಳು ಜನರಿಗೆ ಸಕಾಲದಲ್ಲಿ ತಲುಪುವ ಉದ್ದೇಶದಿಂದ ಪ್ರಜಾಸೇವೆ ಆಂದೋಲನ  ಆಯೋಜನೆ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಶ್ರೀಧರ ಎಸ್.ಮುಂದಲಮನಿ ಹೇಳಿದರು. 


ಅವರು ಮೂಡುಬಿದಿರೆ ತಾಲೂಕು ಕಚೇರಿಯ ಆಶ್ರಯದಲ್ಲಿ ಆಡಳಿತ ಸೌಧದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರಜಾ ಸೇವೆ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು. 


ಈ ಸಭೆಯಲ್ಲಿ ಜನರ ಮನವಿ ಹಾಗೂ ದೂರುಗಳನ್ನು ಆಲಿಸಲಾಗುವುದು. ಸಮಸ್ಯೆಗಳನ್ನು ಪೋರ್ಟಲ್ ಮೂಲಕ ದಾಖಲಿಸಲಾಗುವುದು. ಬಳಿಕ ಅಧಿಕಾರಿಗಳು ತಾಲೂಕು ಅಥವಾ ಜಿಲ್ಲಾಮಟ್ಟದಲ್ಲಿ ಬಗೆಹರಿಸಲಾಗುವುದು. ಅದೂ ಸಾಧ್ಯವಾಗದಿದ್ದರೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ಇಲ್ಲಿ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳೂ ಪೋರ್ಟಲ್ ಮೂಲಕ ಇರಲಿದೆ. ಪ್ರತೀ ಬುಧವಾರ ಜಿಲ್ಲಾಧಿಕಾರಿಗಳು ಸ್ವೀಕೃತವಾದ ಅರ್ಜಿಗಳ ಪರಿಶೀಲನೆ ಮಾಡಲಿದ್ದಾರೆ. ಜನರ ಮನೆಬಾಗಿಲಿಗೆ ಹೋಗಿ ಅಹವಾಲು ಅರಿತು ಸಮಸ್ಯೆ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಲಿದೆ. 

ಸಭೆಗೆ ಮೂಡ ಇಲಾಖೆಯ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ ಈ ಬಗ್ಗೆ ಪ್ರಶ್ನಿಸಲು ಅಧಿಕಾರಿಗಳು ಹಾಜರಾಗದಿರುವ ಬಗ್ಗೆ ಯಾದವ ಶೆಟ್ಟಿ ಪ್ರಶ್ನಿಸಿದರು. 

ಸಭೆಗಳಿಗೆ ಅಧಿಕಾರಿಗಳು ಗೈರು ಹಾಜರಾದರೆ ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು. 

ಇದೇ ಸಂದಭ೯ದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರ ವಿತರಿಸಲಾಯಿತು.

ಬೆಳುವಾಯಿ ಗ್ರಾ.ಪಂ. ಸದಸ್ಯ ಭರತ್ ಶೆಟ್ಟಿ ಮಾತನಾಡಿ, ಬೆಳುವಾಯಿ ಕಾನದಲ್ಲಿರುವ 52ಎಕ್ರೆ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿ ಅತಿಕ್ರಮಣ ಮಾಡಿದ್ದು ಇದನ್ನು ಸವೆ೯ ಮಾಡಿ ಕುಮ್ಕಿ ಜಾಗವನ್ನು ಗುರುತಿಸುವಂತೆ ಆಗ್ರಹಿಸಿದರು. ಪಂಚಾಯತ್ ಜಾಗವು ಅರಣ್ಯ ಇಲಾಖೆಗೆ ಸೇರಿದ್ದೆಂದು ದಾಖಲೆಯಲ್ಲಿರುವುದರಿಂದ ಪಂಚಾಯತ್ ನೂತನ ಕಟ್ಟಡ ನಿಮಿ೯ಸಲು ಅಸಾಧ್ಯವಾಗಿದೆ ಎಂದು ತಿಳಿಸಿದರು. ಸಿಪಿಐಎಂನ ಯಾದವ ಶೆಟ್ಟಿ ಅವರು ಮಾತನಾಡಿ ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳೂ  ಇಲ್ಲ. ವೈದ್ಯರೂ ಇಲ್ಲ. ಈ ಬಗ್ಗೆ ಗಮನಹರಿಸಬೇಕು. ಆಸ್ಪತ್ರೆ ರೋಗಿಗಳಿಗೆ ಉಪಯೋಗವಾಗುವಂತಿರಬೇಕು ಎಂದು  ತಿಳಿಸಿದರು.

ತಾಲೂಕಿನಲ್ಲಿ ಬ್ಯಾಂಕ್ ಅಧಿಕಾರಿಗಳು, ಕೊರಗ ಸಮುದಾಯ, ಕೃಷಿಕರ ಸಭೆ ಕರೆದು ಅವರ ಕುಂದುಕೊರತೆ ಆಲಿಸಬೇಕು ಎಂದರು.

ಗ್ರಾಮ ಗ್ರಾಮಕ್ಕೆ ಸರಕಾರಿ ಬಸ್ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪಡುಮಾರ್ನಾಡು ಗ್ರಾಮದ ಸಮಸ್ಯೆಗಳನ್ನು ಆಲಿಸಲು ಗ್ರಾಮಕಾರಣಿಕರಿಲ್ಲ ಆದ್ದರಿಂದ ಈ ಭಾಗದಲ್ಲಿ  ಗ್ರಾಮಕರಣಿಕರನ್ನು ನೇಮಕ ಮಾಡಬೇಕು ಎಂದು ತಾಲೂಕು ಭೂ ನ್ಯಾಯ ಮಂಡಳಿಯ  ಸದಸ್ಯ ರಮೇಶ್ ಶೆಟ್ಟಿ ಅವರು ಅಧಿಕಾರಿಗಳ ಗಮನಕ್ಕೆ ತಂದರು. 

ಜಿಲ್ಲಾ ಮಟ್ಟದಲ್ಲಿ ಆಗುವಂತೆ ತಾಲೂಕು ಮಟ್ಟದಲ್ಲಿ ಆಹಾರ ಸುರಕ್ಷತಾ ಲ್ಯಾಬ್ ನಿರ್ಮಾಣವಾಗಬೇಕು. ಸಂತೆಗೆ ಬರುವ ಆಹಾರ ವಸ್ತುಗಳ ಬಗ್ಗೆ ನಿಯಮಿತ ತಪಾಸಣೆ ಮಾಡಬೇಕು ಎಂದು ಧನಂಜಯ ಮೂಡುಬಿದಿರೆ ಅವರು ಆಗ್ರಹಿಸಿದಾಗ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಮಾರ್ಪಾಡಿ ಗ್ರಾಮದ ಕಡದಬೆಟ್ಟುವಿನಲ್ಲಿ ಬೀದಿದೀಪ ಸಮಸ್ಯೆ ಇದೆ. ವಿಷಜಂತುಗಳ ಕಾಟವೂ ಇದ್ದು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಭೋಜರಾಜ್ ಆಗ್ರಹಿಸಿದರು.

ಕನ್ನಡ ಜಾಗೃತ ಸಮಿತಿ ಅಧ್ಯಕ್ಷ ರಾಜೇಶ್ ಕಡಲಕೆರೆ  ಮಾತನಾಡಿ, ಇಲ್ಲಿನ ಕಡತಗಳು ಮಂಗಳೂರು ಸಹಾಯಕ ಆಯುಕ್ತರ ಕಚೇರಿಗೆ ರವಾನೆಯಾಗುತ್ತದೆ. ಆದರೆ ಅಲ್ಲಿ ಕ್ಷುಲ್ಲಕ ಕಾರಣ ನೀಡಿ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಮೂಡುಬಿದಿರೆ ಠಾಣಾಧಿಕಾರಿ ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಪುರಸಭೆ ಆಡಳಿತಾಧಿಕಾರಿ ಇಂದು ಎಂ.ಉಪಸ್ಥಿತರಿದ್ದರು.

ಉಪ ತಹಶೀಲ್ದಾರ್ ರಾಮ ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article