ಸಂತ ಫಿಲೋಮಿನಾ ಕಾಲೇಜಿನಲ್ಲಿ ಗ್ರಾಹಕ ವೇದಿಕೆ ಚಟುವಟಿಕೆಗಳಿಗೆ ಚಾಲನೆ
Thursday, September 17, 2026
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ)ದಲ್ಲಿ 2026-27ನೇ ಸಾಲಿನ ಗ್ರಾಹಕ ವೇದಿಕೆ (Consumer Forum) ಚಟುವಟಿಕೆಗಳಿಗೆ ಮಂಗಳವಾರ ಸ್ಪಂದನ ಸೆಮಿನಾರ್ ಹಾಲ್ನಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳಲ್ಲಿ ಗ್ರಾಹಕರ ಹಕ್ಕುಗಳು, ಜವಾಬ್ದಾರಿಗಳು ಹಾಗೂ ಗ್ರಾಹಕ ದೂರುಗಳ ಪರಿಹಾರಕ್ಕೆ ಲಭ್ಯವಿರುವ ವ್ಯವಸ್ಥೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಗ್ರಾಹಕ ಮಾಹಿತಿ ಕೇಂದ್ರದ ಉಪಾಧ್ಯಕ್ಷ ಎಡ್ವಿನ್ ನಜಾರಿಯಸ್ ಡಿ’ಮೆಲ್ಲೋ ಮುಖ್ಯ ಅತಿಥಿಯಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಕಾರ್ಯದರ್ಶಿ ಡಿ.ಆರ್. ಸುನಂದಾ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿ ಎಡ್ವಿನ್ ನಜಾರಿಯಸ್ ಡಿ’ಮೆಲ್ಲೋ ಮಾತನಾಡಿ, ಮಂಗಳೂರಿನ ಗ್ರಾಹಕ ಮಾಹಿತಿ ಕೇಂದ್ರದ ಕಾರ್ಯವೈಖರಿ ಹಾಗೂ ಗ್ರಾಹಕರಿಗೆ ಅದು ಒದಗಿಸುವ ನೆರವಿನ ಕುರಿತು ವಿವರಿಸಿ, ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರುವುದರ ಜೊತೆಗೆ ಜವಾಬ್ದಾರಿಯುತ ಹಾಗೂ ಜಾಗೃತ ಗ್ರಾಹಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಗೌರವ ಅತಿಥಿ ಡಿ.ಆರ್. ಸುನಂದಾ ಮಾತನಾಡಿ, ದೈನಂದಿನ ಬದುಕಿನಲ್ಲಿ ಗ್ರಾಹಕ ಜಾಗೃತಿಯ ಮಹತ್ವ, ಗ್ರಾಹಕರ ಸಮಸ್ಯೆಗಳು ಹಾಗೂ ದೂರುಗಳನ್ನು ಪರಿಹರಿಸುವಲ್ಲಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರಗಳ ಪಾತ್ರವನ್ನು ಅವರು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರು ಗ್ರಾಹಕ ವೇದಿಕೆಯ ಉಪಕ್ರಮವನ್ನು ಶ್ಲಾಘಿಸಿ, ವೇದಿಕೆಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಅದರ ಉದ್ದೇಶಗಳನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.
2026-27ನೇ ಸಾಲಿನಲ್ಲಿ ಗ್ರಾಹಕ ವೇದಿಕೆ ಹಮ್ಮಿಕೊಳ್ಳಲಿರುವ ವಿವಿಧ ಚಟುವಟಿಕೆಗಳ ಕಾರ್ಯಯೋಜನೆಯನ್ನು ಕಿರುಚಿತ್ರ ಪ್ರದರ್ಶನದ ಮೂಲಕ ಅನಾವರಣಗೊಳಿಸಲಾಯಿತು.
ಶಿಲ್ಪಾ ಇ. ಸ್ವಾಗತಿಸಿದರು. ವಿಸ್ಮಿತ್ ವಂದಿಸಿ, ಗ್ರಾಹಕ ವೇದಿಕೆಯ ಸಂಯೋಜಕರಾದ ಸ್ವಾತಿ ಶೆಟ್ಟಿ ಡಿ. ಹಾಗೂ ಕಿಶೋರ್ ಕುಮಾರ್ ರೈ ಕಾರ್ಯಕ್ರಮವನ್ನು ಸಂಯೋಜಿಸಿದರು. ಅಪೂರ್ವಾ ಕಾರ್ಯಕ್ರಮ ನಿರೂಪಿಸಿದರು.



