Udupi: ಆದ್ಯತಾ ವಲಯಕ್ಕೆ ೧೧೦೫೭.೬ ಕೋ.ರೂ. ಸಾಲ ಯೋಜನೆ ಗುರಿ
ಉಡುಪಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ೨೦೨೪- ೨೫ನೇ ಸಾಲಿಗೆ ಜಿಲ್ಲೆಯಲ್ಲಿ ೧೧,೦೫೭.೬ ಕೋ.ರೂ.ಗಳನ್ನು ಆದ್ಯತಾ ವಲಯಕ್ಕೆ ಸಾಲ ಯೋಜನೆ ನೀಡುವ ಗುರಿ ಹೊಂದಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಬಾರ್ಡ್ ವತಿಯಿಂದ ಹೊರತಂದಿರುವ ಪೊಟೆನ್ಶಿಯಲ್ ಲಿಂಕ್ಡ್ ಕ್ರೆಡಿಟ್ ಪ್ಲಾನ್ ೨೦೨೪- ೨೫ನೇ ಸಾಲಿನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆ ಉತ್ತೇಜಿಸಲು ಹಾಗೂ ಮೂಲ ಸೌಕರ್ಯ ಕಲ್ಪಿಸಲು ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ೨೦೨೪- ೨೫ನೇ ಸಾಲಿಗೆ ೧೧,೦೫೭.೬ ಕೋ. ರೂ. ಸಾಲ ನೀಡಲು ಉದ್ದೇಶಿಸಿದ್ದು, ಅದರಲ್ಲಿ ಶೇ. ೪೮.೩೦ರಷ್ಟು ಕೃಷಿ ಚಟುವಟಿಕೆಗಳಿಗೆ ಸಾಲ ನೀಡಲು ಮೀಸಲಿರಿಸಿದರೆ, ಸೂಕ್ಷ್ಮ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ಶೇ. ೩೩.೩, ವಸತಿ ಯೋಜನೆಗೆ ಶೇ. ೭.೩೫, ಶಿಕ್ಷಣಕ್ಕೆ ಶೇ. ೧.೨೫, ಆದ್ಯತಾ ವಲಯಕ್ಕೆ ಶೇ. ೫.೭೫, ಸಾಮಾಜಿಕ ಅಭಿವೃದ್ಧಿಗೆ ಶೇ. ೦.೮೦, ರಫ್ತು ಸಾಲ ಶೇ. ೨.೭೫ರಷ್ಟು ವಲಯವಾರು ಸಾಲದ ಪ್ರಮಾಣ ಅಂದಾಜಿಸಲಾಗಿದೆ ಎಂದರು.
ನಬಾರ್ಡ್ ಗ್ರಾಮೀಣ ಜನತೆಗೆ ಸಮೃದ್ಧ ಹಾಗೂ ಸುಸ್ಥಿರ ಜೀವನ ನಡೆಸಲು ಅವಕಾಶ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ನಬಾರ್ಡ್ ಬ್ಯಾಂಕಿನ ಸಂಗೀತಾ ಕಾರ್ಥಾ, ಕರ್ಣಾಟಕ ಬ್ಯಾಂಕ್ ರೀಜನಲ್ ಮ್ಯಾನೆಜರ್ ರಾಜಗೋಪಾಲ್, ಎಸ್.ಬಿ.ಐ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಶೀಬಾ ಸೆಹೆಜಾನ್, ಶೋಭಲತಾ, ರಾಜ್ಗೋಪಾಲ್, ಯೂನಿಯನ್ ಬ್ಯಾಂಕಿನ ಡಿ.ಆರ್.ಎಮ್ ಶಿವಕುಮಾರ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ. ಪಿಂಜಾರ ಮೊದಲಾದವರಿದ್ದರು.